ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನವೆಂಬರ್ ಕ್ರಾಂತಿ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ 5 ವರ್ಷ ಇರ್ತಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಅಂದುಕೊಂಡವರು. ಆದರೆ ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ ಮೇಲೆ ಸಿಎಂ ಬದಲಾವಣೆ ಅನ್ನೋ ವಿಷಯವೇ ಇಲ್ಲ ಎಂದರು.
ಸಿಎಂ ಅವರು ನಾನೇ ಇರುತ್ತೇನೆ ಅಂತ ಹೇಳಿದ್ದಾರೆ. ಡಿಕೆ ಶಿವಕುಮಾರ್ ಕೂಡಾ ಸಿದ್ದರಾಮಯ್ಯ ಇರುತ್ತಾರೆ ಅಂತ ಹೇಳಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಅನ್ನೋ ಪ್ರಶ್ನೆಯೇ ಕೇಳೋ ಹಾಗೇ ಇಲ್ಲ. ನವೆಂಬರ್ ಕ್ರಾಂತಿ ಇಲ್ಲ. ಬರೀ ಬ್ರಾಂತಿ ಅಷ್ಟೇ. ನವೆಂಬರ್ಗೆ ಸಚಿವ ಸಂಪುಟ ಪುನರ್ ರಚನೆ ಆಗಬಹುದು. ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಿರ್ಧಾರ ಮಾಡಿ ಯಾವಾಗ ಬೇಕಾದರೂ ಸಂಪುಟ ಪುನರ್ ರಚನೆ ಮಾಡಬಹುದು ಎಂದು ಹೇಳಿದರು.
ಈಗ ಡಿಕೆ ಶಿವಕುಮಾರ್ ಬೆಂಗಳೂರು ಸಚಿವರು ಆಗಿದ್ದಾರೆ. ಈಗೇನು ಖಾಲಿ ಇಲ್ಲ. ಖಾಲಿ ಇದ್ದರೂ ಕೂಡ ನಾನೇನು ಕೇಳೋಕೆ ಹೋಗಲ್ಲ. ನಾನು ಯಾವತ್ತು ಮಂತ್ರಿ ಆಗಬೇಕು, ಇಂತಹ ಖಾತೆ ಬೇಕು, ಜಿಲ್ಲಾ ಉಸ್ತುವಾರಿ ಬೇಕು ಅಂತ ಕೇಳಿಲ್ಲ. ನನ್ನ ಸರ್ವೀಸ್ನಲ್ಲಿ ಕೇಳಿಲ್ಲ. ಈಗಲೂ ಕೇಳಿಲ್ಲ. ಮುಂದೆಯೂ ಕೇಳೊಲ್ಲ ಎಂದು ಸ್ಪಷ್ಟಪಡಿಸಿದರು.