ಬೆಂಗಳೂರು: ನಮ್ಮ ಮೆಟ್ರೋ ಬದಲು ಬಸವ ಮೆಟ್ರೋ ಎಂದು ನಾಮಕರಣ ಮಾಡಲು ಸಿಎಂ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದು ಈಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ನಡೆದ ಬಸವ ಜಯಂತೋತ್ಸವದಲ್ಲಿ ಸಿದ್ದರಾಮಯ್ಯ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ʼಬಸವ ಮೆಟ್ರೋʼ ಎಂದು ಘೋಷಿಸಿ ಬಿಡುತ್ತಿದ್ದೆ ಎಂದು ಹೇಳಿದ್ದರು.
ಸಿದ್ದರಾಮಯ್ಯನವರೇ ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ. ಮೆಟ್ರೋಗೆ ಹೆಸರು ಇಡುವುದು ಮುಖ್ಯವಲ್ಲ. ದರ ಇಳಿಸುವುದು ಮುಖ್ಯ. ಭಾರತದ ಯಾವ ಮೆಟ್ರೋದಲ್ಲಿ ಏರಿಸದಷ್ಟು ದರವನ್ನು ಬೆಂಗಳೂರಿನಲ್ಲಿ ಏರಿಸಿದ್ದೀರಿ. ಮೊದಲು ಆ ದರವನ್ನು ಇಳಿಕೆ ಮಾಡಿ ಎಂದು ನೆಟ್ಟಿಗರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಕೆಲವರು ನಮ್ಮ ಮೆಟ್ರೋ ಈಗಾಗಲೇ ಜನಜನಿತವಾಗಿದೆ. ಹೊರ ರಾಜ್ಯದಿಂದ ಬಂದವರು ನಮ್ಮ ಮೆಟ್ರೋ ಎಂದು ಕರೆಯುತ್ತಿದ್ದಾರೆ. ಬಸವಣ್ಣನ ಬಗ್ಗೆ ನಿಮಗೆ ಇಷ್ಟ ಇದ್ದರೆ ನಿಮ್ಮ ಯಾವುದಾದರು ಯೋಜನೆ ಇಡಿ. ಬೇಕಿದ್ದರೆ ಇಂದಿರಾ ಕ್ಯಾಂಟೀನ್ ಬದಲು ಬಸವ ಕ್ಯಾಂಟೀನ್ ಎಂದು ಬದಲಾಯಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಸಿದ್ದರಾಮಯ್ಯನವರ ನಿರ್ಧಾರ ಸರಿಯಾಗಿದೆ. ಕಾಯಕಯೋಗಿ ಬಸವಣ್ಣ ಎಲ್ಲರಿಗೂ ಆದರ್ಶ. ಬಸವ ಮೆಟ್ರೋ ಇಡುವ ನಿರ್ಧಾರ ಸರಿಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.