ದಾವಣಗೆರೆ: ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಯ ಗಡಿಯಲ್ಲಿ ಇರುವ ಶಾಮನೂರು ಶುಗರ್ ಫ್ಯಾಕ್ಟರಿಯಿಂದ ನೂರಾರು ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ. ಆ ಪ್ರದೇಶದಲ್ಲಿನ ಹಳ್ಳವನ್ನು ಸಹ ಮುಚ್ಚಲಾಗಿದೆ ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ್ , ಶಾಮನೂರು ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಭೂಮಿ ಕಬಳಿಕೆ ಬಗ್ಗೆ ನಾನು ಸದನದಲ್ಲೂ ಮಾತಾಡಿದ್ದೇನೆ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಿ.ಪಿ.ಹರೀಶ್, ಭೂಮಿ ಕಬಳಿಕೆ ಬಗ್ಗೆ ನಾನು ಸದನದಲ್ಲೂ ಮಾತಾಡಿದ್ದೇನೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಅದೇ ದೂರಿನ ಅನ್ವಯ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ದೇಶದಲ್ಲಿ ಸರ್ವೆ ಮಾಡಲು ಆದೇಶವಾಗಿದೆ ಎಂದರು.
ಅ. 27ಕ್ಕೆ ಸರ್ವೆ ಇಲಾಖೆ ಜಂಟಿ ನಿರ್ದೇಶಕರ ನೇತ್ರತ್ವದಲ್ಲಿ ಮರು ಸರ್ವೆ ನಡೆಯಲಿದೆ. ಹೀಗೆ ಸರ್ವೆ ಅಧಿಕಾರಿಗಳು ಬರುತ್ತಾರೆ ಎಂದು ಗೊತ್ತಾಗಿದ್ದೇ ತಡ ನಿನ್ನೆ ರಾತ್ರಿ ಹಳ್ಳ ಸರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೆ ನಾನು ಇವರನ್ನ ಬಿಡಲ್ಲ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಕಂದಾಯ ಸಚಿವರಿದ್ದಾಗ ಶಾಮನೂರ ಗ್ರಾಮದ ಜಮೀನು ಕಬಳಿಸಲು ಇದೇ ಶಾಮನೂರು ಕುಟುಂಬ ಮುಂದಾಗಿತ್ತು. ಆಗಲು ಹೋರಾಟ ನಡೆಸಿ ರೈತರ ಭೂಮಿ ಉಳಿಸಿದ್ದೇ, ಈಗಲೂ ಹೋರಾಟ ಮಾಡಿ ರೈತರ ಭೂಮಿ ಉಳಿಸುವೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ ವಿರುದ್ಧ ವಾಗ್ದಾಳಿ
ನಾನು ಹುಚ್ಚು ನಾಯಿ ಕಡಿದವರಂತೆ ಮಾತಾಡುತ್ತೇನೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಾಪ ದಿನೇಶ್ ಶೆಟ್ಟಿ ಶಾಮನೂರ ಕುಟುಂಬದ ಸೇವೆ ಮಾಡಿ ಮಾಡಿ ಈಗ ಪ್ರಾಧಿಕಾರದ ಅಧ್ಯಕ್ಷ ಆಗಿದ್ದಾರೆ. ನಾನು ಹುಚ್ಚುನಾಯಿ ಕಡಿದವರನಂತೆ ಆಡುತ್ತೇನೆ. ಆ ಹುಚ್ಚುನಾಯಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅಥವಾ ಮತ್ಯಾರು ಅಂತಾ ಕಾಂಗ್ರೆಸ್ ನಾಯಕರೇ ಹೇಳಬೇಕು ಎಂದು ಕಿಡಿಕಾರಿದ್ದಾರೆ.
ಆರ್ಎಸ್ಎಸ್ ನಿಷೇಧ ಕಾಂಗ್ರೆಸ್ ನಾಯಕರಿಂದ ಸಾಧ್ಯವಿಲ್ಲ
ಆರ್ಎಸ್ಎಸ್ ವಿಚಾರವಾಗಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆಗೆ ಅಧಿಕಾರದ ದರ್ಪ ಹೆಚ್ಚಾಗಿದೆ ಇದೇ ಕಾರಣಕ್ಕೆ ಆರ್ಎಸ್ಎಸ್ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಹೇಳಿದರೆ ಡಿಸಿಎಂ ಅಥವಾ ಸಿಎಂ ಆಗಬಹುದು ಎಂದು ಅವರ ಮನಸ್ಸಿನಲ್ಲಿ ಇರಬಹುದು. ಆರ್ಎಸ್ಎಸ್ ನಿಷೇಧ ಮಾಡುವುದು ಕಾಂಗ್ರೆಸ್ ನಾಯಕರಿಂದ ಸಾಧ್ಯವಿಲ್ಲ ಎಂದಿದ್ದಾರೆ.
