ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಬೇಸತ್ತು ವಿಷ ಸೇವಿಸಿದ್ದ ಮಹಿಳೆ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಯಲ್ಲಿಯೇ ಶವ ಬಿಟ್ಟು ಪತಿ ಹಾಗೂ ಆತನ ಕುಟುಂಬಸ್ಥರು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೃತಳನ್ನು ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಮೂಲದ ಪೂಜಾ ಎಂದು ಗುರುತಿಸಲಾಗಿದೆ. ಮೂರು ವರ್ಷದ ಹಿಂದೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಜೊತೆ ಪೂಜಾಳನ್ನು ಮದುವೆ ಮಾಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಪುತ್ರನಿದ್ದಾನೆ. ಶರತ್ ತಂದೆ, ತಾಯಿ ಹಾಗೂ ಶರತ್ನ ಸಹೋದರಿ ಸೇರಿಕೊಂಡು ಪೂಜಾಳಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಪೂಜಾ ತಾಯಿ ಮನೆಗೆ ಬಂದು ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ಬಳಿಕ ಸಮಾಧಾನ ಮಾಡಿ ಮತ್ತೆ ಪತಿ ಮನೆಗೆ ಕಳಿಸಿದ್ದರು.
ಮತ್ತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪೂಜಾ ಕಳೆನಾಶಕ ಸೇವಿಸಿದ್ದಳು. ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಲೆ. ಇದರಿಂದ ಪತಿಯ ಕುಟುಂಬದವರು ಹೆದರಿ ಶವ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
