ಚಿಕ್ಕಮಗಳೂರು: ವಾಯುವಿಹಾರಕ್ಕೆ ತೆರಳಿದ್ದ ವೈದ್ಯ ದಾರಿ ತಪ್ಪಿ ನಾಲ್ಕು ದಿನಗಳ ಕಾಲ ಕಾಡಲ್ಲೇ ಕಾಲ ಕಳೆದಿರುವುದು ಕೊಪ್ಪ ತಾಲೂಕಿನ ಕಾಡಂಚಿನ ಗುಣವಂತೆ ಗ್ರಾಮದ ಬಳಿ ನಡೆದಿದೆ. ಇವರನ್ನು ಪೊಲೀಸ್ ಇಲಾಖೆಯ ಶ್ವಾನ ದಳ ಪತ್ತೆ ಮಾಡಿದೆ.
ನವೆಂಬರ್ 2ರಂದು ವಾಯುವಿಹಾರಕ್ಕೆ ಬಂದಿದ್ದ ವೈದ್ಯ ವೆಂಕಟೇಗೌಡ (75) ದಾರಿ ತಪ್ಪಿ ಕಾಡು ಸೇರಿದ್ದರು. ಮರೆವಿನ ಖಾಯಿಲೆ ಇದ್ದ ಅವರು ವಾಪಸ್ ಬರಲು ಗೊತ್ತಾಗದೇ ಗ್ರಾಮದ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಸುತ್ತಾಡಿದ್ದರು. ಹೀಗೆ ಸುಮಾರು 4ದಿನ ಸುತ್ತಾಡಿ ಕೊನೆಗೆ ಕಾಡಿನಲ್ಲೇ ಉಳಿದಿದ್ದರು.
ಕುಟುಂಬಸ್ಥರು ಎಷ್ಟೇ ಹುಡುಕಿದ್ರೂ ಅವರು ಸುಳಿವು ಸಿಕ್ಕಿರಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಹುಡುಕಾಟ ಆರಂಭಿಸಿದಾಗ ಗ್ರಾಮದ ಮನೆಯೊಂದರಲ್ಲಿ ನೀರು ಕುಡಿದು ಹೋಗಿದ್ದರು ಎಂದು ತಿಳಿದು ಬಂದಿತ್ತು. ಎಸ್ಪಿ ವಿಕ್ರಂ ಸೂಚನೆ ಮೇರೆಗೆ ಶ್ವಾನವನ್ನು ತಂದು ಹುಡುಕಾಟ ನಡೆಸಿದಾಗ ಕಾಡಂಚಲ್ಲಿ ಅವರ ಪಂಚೆ ಪತ್ತೆಯಾಗಿತ್ತು.
ಪಂಚೆಯ ವಾಸನೆ ಜಾಡು ಹಿಡಿದು 5 ಕಿ.ಮೀ. ಕಾಡಿನಲ್ಲಿದ್ದ ವೈದ್ಯರನ್ನು ಶ್ವಾನ ಪತ್ತೆ ಮಾಡಿದೆ. ಅವರನ್ನು ಪೊಲೀಸರು ರಕ್ಷಣೆ ಮಾಡಲಾಗಿದ್ದು, ಸುರಕ್ಷಿತವಾಗಿದ್ದಾರೆ.
