ಬೆಂಗಳೂರು: ನಟಿ ಆಶಿಕಾ ರಂಗನಾಥ್ ಸಂಬಂಧಿ ಅಚಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತಳ ಸಿಡಿಆರ್ ರಿಪೋರ್ಟ್ ಪುಟ್ಟೇನಹಳ್ಳಿ ಪೊಲೀಸರ ಕೈಸೇರಿದೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರಿಗೆ ಇದೀಗ ಅಚಲಳ ಸಿಡಿಆರ್ ವರದಿ ಸಿಕ್ಕಿದೆ. ಸಿಡಿಆರ್ ವರದಿಯಲ್ಲಿ ಆರೋಪಿ ಮಯಾಂಕ್ ಸಂಪರ್ಕ ಪತ್ತೆಯಾಗಿದ್ದು, ಅಚಲ ಜೊತೆ ಹಲವು ಬಾರಿ ಕರೆಯಲ್ಲಿ ಮಾತನಾಡಿರುವುದು ತಿಳಿದುಬಂದಿದೆ. ಇತ್ತ ವರದಿ ಕೈಸೇರುತ್ತಿದ್ದಂತೆ ಆರೋಪಿ ನೋಟಿಸ್ ಕೊಡ್ತಾರೆ, ವಿಚಾರಣೆಗೆ ಕರೆಯುತ್ತಾರೆ ಎಂಬ ಭಯದಲ್ಲಿ ಪೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ.
ಸದ್ಯ ಹಾಸನ ಹಾಗೂ ಬೆಂಗಳೂರಿನಲ್ಲಿ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸಿದ್ದು, ಮತ್ತೊಂದೆಡೆ ಅಚಲಾಳ ಐಪೋನ್ ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ವಾಟ್ಸಪ್ ಡೇಟಾ ರಿಟ್ರೀವ್ಗೆ ಎಫ್ಎಸ್ಎಲ್ಗೆ ಕಳುಹಿಸಿದ್ದು, ವಾಟ್ಸಪ್ ರಿಟ್ರೀವ್ ಆದ್ರೆ ಮತ್ತಷ್ಟು ಸಾಕ್ಷ್ಯ ದೊರಕಲಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ನ.21ರಂದು ಹಾಸನ ಮೂಲದ ಅಚಲ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಬಳಿಕ ಅಚಲಳ ತಂದೆ ಹರ್ಷ ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಗಳ ಸಾವಿಗೆ ನೇರ ಕಾರಣ ಮಯಾಂಕ್ ಗೌಡ. ಅಚಲಳಿಗೆ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡಿದ್ದ. ಲೈಂಗಿಕವಾಗಿ ಸಹಕರಿಸಲು ಒತ್ತಾಯ ಮಾಡುತ್ತಿದ್ದ. ಅದಕ್ಕೆ ಅಚಲ ಒಪ್ಪಿಕೊಳ್ಳದೆ ಇದ್ದಾಗ ಆಕೆಗೆ ಹಲವು ಬಾರಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಮೃತ ಅಚಲ ತಂದೆ ಹರ್ಷ ನೀಡಿದ್ದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಮಯಾಂಕ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಡೆತ್ ನೋಟ್ ಆಗಲಿ ಮೃತ ಅಚಲ ಪೋಷಕರು ಮಾಡಿರುವ ಆರೋಪ ಸಂಬಂಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ? ಎಫ್ಎಸ್ಎಲ್ ವರದಿ ಬಳಿಕ ಸತ್ಯ ಬಯಲಾಗಲಿದೆ.
