Ad image

ಹಾದಿ ಹತ್ಯೆ ಬಳಿಕ ಭುಗಿಲೆದ್ದ ಹಿಂಸಾಚಾರ – ಬಾಂಗ್ಲಾದಲ್ಲಿ ಭಾರತೀಯ ವೀಸಾ ಸೇವೆ ಸ್ಥಗಿತ

Team SanjeMugilu
1 Min Read

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾರತೀಯ ಅಲ್ಪ ಸಂಖ್ಯಾತರ ಮೇಲೆ ಹಿಂಸಾಚಾರ ಮುಂದುವರಿದಿದೆ. ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಬಾಂಗ್ಲಾ ನಾಯಕರು ಅಲ್ಲಿನ ಜನರನ್ನ ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡುತ್ತಿದೆ. ಈ ಬೆನ್ನಲ್ಲೇ ಭಾರತ ಸರ್ಕಾರವು ಚಿತ್ತಗಾಂಗ್‌ ನಲ್ಲಿರುವ  ಭಾರತೀಯ ವೀಸಾ ಅರ್ಜಿ ಕೇಂದ್ರವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ  ವೀಸಾ ಅರ್ಜಿಗಳನ್ನು  ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
IVAC ಪ್ರಕಾರ, ಬಂದರು ನಗರದಲ್ಲಿ ಎಲ್ಲಾ ಭಾರತೀಯ ವೀಸಾ ಸಂಬಂಧಿತ ಸೇವೆಗಳು ಡಿಸೆಂಬರ್ 21 ರಿಂದ ಮುಂದಿನ ಸೂಚನೆ ಬರುವವರೆಗೆ ಮುಚ್ಚಲ್ಪಡುತ್ತವೆ. ಭದ್ರತಾ ಪರಿಸ್ಥಿತಿಯ ಪರಿಶೀಲನೆಯ ನಂತರ ವೀಸಾ ಅರ್ಜಿ ಕೇಂದ್ರವನ್ನು ಪುನರಾರಂಭಿಸುವ ಬಗ್ಗೆ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಬಾಂಗ್ಲಾ ʻಹಾದಿʼಯಲ್ಲಿ ಗಲಭೆ
ಕಳೆದ ವರ್ಷ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಂದಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ದೇಶವನ್ನೇ ತೊರೆಯುವಂತೆ ಮಾಡವಲ್ಲಿ ಹಾದಿ ಜನಪ್ರಿಯತೆ ಗಳಿಸಿದ್ದರು. ಇನ್ನು, ಅವರು ಈ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಫರ್ಧಿಸುವ ಸಲುವಾಗಿ ಡಿಸೆಂಬರ್ 12 ರಂದು ಢಾಕಾ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದರು.

ಈ ವೇಳೆ ಮುಸುಕಧಾರಿ ದುಷ್ಕರ್ಮಿಗಳು ಹಾದಿ ತಲೆಗೆ ಗುಂಡು ಹಾರಿಸಿದ್ದರು. ನಂತರ ಆತನನ್ನ ಸಿಂಗಾಪುರಕ್ಕೆ ಚಿಕಿತ್ಸೆಗೆಂದು ತೆರಳಿಸಿದರು ಸಹ ಅವರು ಕೊನೆಗೆ ಸಾವನ್ನಪ್ಪಿದರು. ಇದರಿಂದ ಆಕ್ರೋಶ ಭುಗಿಲೆದ್ದಿದ್ದು, ಬಾಂಗ್ಲಾದೇಶದಾದ್ಯಂತ ಅಶಾಂತಿ ಮತ್ತು ಗಲಭೆಗೆ ನಾಂದಿ ಹಾಡಿತು. ಈ ಗಲಭೆಯಲ್ಲಿ ಚಟ್ಟೋಗ್ರಾಮ್‌ ಭಾರತದ ಸಹಾಯಕ ಉಚ್ಚಾಯುಕ್ತರ ನಿವಾಸದ ಮೇಲೆ ಕಲ್ಲು ತೂರಾಟ, ಹಿಂದೂಗಳ ಮೇಲೆ ಹಲ್ಲೆ ನಡೆಸುವುದು ಸೇರಿದಂತೆ ಹಲವು ಭೀಕರ ದಾಳಿಗಳಿಗೆ ಸಾಕ್ಷಿಯಾಗಿದೆ. ಶನಿವಾರವಷ್ಟೇ ಶರೀಫ್‌ ಉಸ್ಮಾನ್‌ ಹಾದಿಯ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆದಿತ್ತು.

Share This Article