ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮನೆ ಕಟ್ಟೋರಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸೆಟ್ಬ್ಯಾಕ್ ಅಂದ್ರೆ ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ ಬಿಡದೆ ಮನೆ ನಿರ್ಮಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಅವಘಡದ ವೇಳೆ ಕಾರ್ಯಾಚರಣೆಗಾಗಿ ಮನೆ ಅಥವಾ ಕಟ್ಟಡದ ಸುತ್ತಲು ಬಿಡಲೇಬೇಕಿದ್ದ ಜಾಗ ಇನ್ಮುಂದೆ 8 ರಿಂದ 40 ಅಡಿವರೆಗೆ ಬಿಡುವ ಅವಶ್ಯಕತೆ ಇಲ್ಲ ಎಂದಿದೆ. ಆ ಮೂಲಕ ಸಿಲಿಕಾನ್ ಸಿಟಿಯ ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ದೊಡ್ಡ ಗಿಫ್ಟ್ ಕೊಟ್ಟಿದೆ. ಇದು ಸೆಟ್ಬ್ಯಾಕ್ ಬಿಡದೆ ಸಮಸ್ಯೆ ಎದುರಿಸ್ತಿದ್ದ ಮನೆ ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಸೆಟ್ಬ್ಯಾಕ್ನಲ್ಲಿ ವಿನಾಯಿತಿ ನೀಡಿ GBA ಆದೇಶ
ಈ ಬಗ್ಗೆ ಮಾಹಿತಿ ನೀಡಿರುವ ಜಿಬಿಎ ಚೀಫ್ ಕಮಿಷನರ್ ಮಹೇಶ್ವರ್ ರಾವ್, ಈಗಾಗಲೇ ಸರ್ಕಾರ ಆದೇಶ ಮಾಡಿದೆ. ಇದರಿಂದ ಜನರಿಗೆ ಬಹಳ ಅನುಕೂಲ ಆಗಲಿದೆ. 600 ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಕೇವಲ 0.60 ಮೀಟರ್ ಅಂದ್ರೆ 2 ಅಡಿಗೆ ಇಳಿಕೆ ಮಾಡಲಾಗಿದೆ. 600 ಚದರ ಅಡಿಯಿಂದ 1,500 ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 2.5 ಅಡಿಗೆ ಇಳಿಕೆ ಮಾಡಲಾಗಿದೆ. 40 ಸಾವಿರ ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ವ್ಯಾಪ್ತಿಗೆ ಇಳಿದಿದೆ ಎಂದು ವಿವರಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೆಟ್ಬ್ಯಾಕ್ ರೂಲ್ಸ್ನಲ್ಲಿ ಕೆಲ ಬದಲಾವಣೆ ಮಾಡಿದೆ. ಈ ಮೊದ್ಲು ಮನೆಗಳಿಗೆ 8 ಅಡಿಯಿಂದ 40 ಅಡಿವರೆಗೆ ಸೆಟ್ಬ್ಯಾಕ್ ಬಿಡುವ ಅವಶ್ಯಕತೆ ಇತ್ತು. ಆದರೆ ಈಗ ಸರ್ಕಾರ ವಿನಾಯ್ತಿ ನೀಡಿದೆ. ಕಟ್ಟಡದ ಯಾವುದಾದ್ರೂ ಒಂದು ಬದಿಯಲ್ಲಿ ಬಿಟ್ರೆ ಸಾಕು. ಉಳಿದ 3 ಕಡೆಗಳಲ್ಲಿ ಯಾವುದೇ ಸೆಟ್ಬ್ಯಾಕ್ ಬಿಡುವ ಅವಶ್ಯಕತೆ ಇಲ್ಲ. ಇದರಿಂದ ಸಾರ್ವಜನಿಕರಿಗೆ ಅಲ್ಪಮಟ್ಟಿಗೆ ಅನುಕೂಲ. ಆದ್ರೆ ರಿಯಲ್ ಎಸ್ಟೇಟ್ ಮಾಫಿಯಾಗೆ ರೆಡ್ ಕಾರ್ಪೆಟ್ ಹಾಕಿದಂತೆ ಅನ್ನೋ ಆರೋಪ ಕೇಳಿಬರ್ತಿದೆ.
ಸಿಲಿಕಾನ್ ಸಿಟಿ ಮಂದಿಗೆ ಗುಡ್ನ್ಯೂಸ್; ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ದೊಡ್ಡ ಗಿಫ್ಟ್
