Ad image

ಮೈಸೂರಿನ ಚಾಮರಾಜ ಬಿಜೆಪಿ ಟಿಕೆಟ್ ಗಾಗಿ ಫೈಟ್ ಶುರು: ಪ್ರತಾಪ್ ಸಿಂಹ ವರ್ಸಸ್ ಎಲ್‌. ನಾಗೇಂದ್ರ

Team SanjeMugilu
2 Min Read

ಮೈಸೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಹಾಗೂ ಮಾಜಿ ಸಂಸದರ ನಡುವೆ ಸಮರ ಏರ್ಪಟ್ಟಿದೆ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯಕ್ಕೆ ಬರಲೇಬೇಕು ತಾನೇ ಎಂದಿದ್ದ ಮಾಜಿ ಸಂಸದ ಪ್ರತಾಪ್​ಸಿಂಹ 2028ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರಿಂದ ಮಾಜಿ ಶಾಸಕ ಎಲ್.ನಾಗೇಂದ್ರ ಆಕ್ರೋಶ ಭುಗಿಲೆದ್ದಿದ್ದು, ಇಬ್ಬರ ನಡುವೆ ಬಹಿರಂಗ ಸಮರಕ್ಕೆ ವೇದಿಕೆ ನಿರ್ಮಾಣವಾಗಿದೆ.

ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ.. ಈ ಮಧ್ಯೆ 2028ರ ಚುನಾವಣೆಗೆ ಕನಸುಗಳ ಬೀಜ ಬಿತ್ತಿರೋ ಬಿಜೆಪಿ ಅಧಿಕಾರಕ್ಕೇರುವ ಉಮೇದಿನಲ್ಲಿದೆ.. ಎರಡೂವರೆ ವರ್ಷಕ್ಕೂ ಮುನ್ನವೇ ಕೇಸರಿ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.. ಸಾಂಸ್ಕೃತಿಕ ನಗರಿಯ ಆ ಕ್ಷೇತ್ರಕ್ಕಾಗಿ ಪ್ರತಾಪ್​ಸಿಂಹ-ನಾಗೇಂದ್ರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

2024ರ ಲೋಕಸಭಾ ಚುನಾವಣೆ ಸ್ಪರ್ಧೆಗೆ ಟಿಕೆಟ್ ಸಿಗದೇ ಹತಾಶರಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಪ್ರಭಾವಿ ನಾಯಕ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಬರಲು ಸಜ್ಜಾಗ್ತಿದ್ದಾರೆ.. ಕಳೆದ ಕೆಲವು ತಿಂಗಳುಗಳಿಂದ ಪ್ರತಾಪ್ ಸಿಂಹ ಮುಂದಿನ ರಾಜಕೀಯ ನಡೆ ಏನು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.. ಮೊನ್ನೆ ಪ್ರತಾಪ್ ಸಿಂಹ ಸ್ನೇಹ ಬಳಗದ ಮೂಲಕ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ತಮ್ಮ ಕರ್ತವ್ಯ ಪಥ ಚಾಮರಾಜ ಕ್ಷೇತ್ರದಲ್ಲಿದೆ ಅಂತ ಘೋಷಣೆ ಮಾಡಿದ್ದರು.. ಈ ಹಿಂದೆ ಮೈಸೂರು ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ರಾಜ್ಯ ರಾಜಕಾರಣ ಆರಂಭಿಸುವುದಾಗಿ ಹೇಳಿದ್ದ ಪ್ರತಾಪ್ ಸಿಂಹ ಈಗ ಅದೇ ದಿಕ್ಕಿನಲ್ಲಿ ಸಾಗಿದ್ದಾರೆ.. ಎರಡೂವರೆ ವರ್ಷಕ್ಕೂ ಮುನ್ನವೇ ಟಿಕೆಟ್​ಗಾಗಿ ತಯಾರಿ ನಡೆಸಿದ್ದು ಕ್ಷೇತ್ರ ಸಂಚಾರ ಮಾಡ್ತಿದ್ದಾರೆ.. ಮೊನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ ಕೇಂದ್ರದ ರಾಜಕಾರಣ ಮುಗಿದ್ಮೇಲೆ ರಾಜ್ಯಕ್ಕೆ ಬರಲೇಬೇಕಲ್ವಾ, ಎಲ್ಲಾ ರೀತಿಯಲ್ಲೂ ನನಗೆ ಚಾಮರಾಜ ಕ್ಷೇತ್ರ ಅನುಕೂಲಕರವಾಗಿದೆ ಅಂತ ಹೇಳಿದ್ದರು.
‘ಕೇಂದ್ರದಿಂದ ರಾಜ್ಯಕ್ಕೆ ಬಂದಿದ್ದೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಚಾಮರಾಜ ಕ್ಷೇತ್ರ ಒಳ್ಳೆಯತನಕ್ಕೆ ಮಣೆ ಹಾಕುವ ಕ್ಷೇತ್ರ’ ಹೀಗಾಗಿ ಚಾಮರಾಜ ಕ್ಷೇತ್ರದಲ್ಲೇ ಕಚೇರಿ ತೆರೆಯುತ್ತೇನೆ’ ಎಂದು ಹೇಳಿದ್ದಾರೆ.

ಚಾಮರಾಜ ಕ್ಷೇತ್ರದ ಮಾಜಿ ಶಾಸಕರೂ ಆಗಿರೋ ನಾಗೇಂದ್ರ ಟಿಕೆಟ್​​ ಬಯಸಿರೋ ಮಾಜಿ ಸಂಸದ ಪ್ರತಾಪ್ ಸಿಂಹಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.. ಟಿಕೆಟ್ ಯಾರಿಗೆ ಕೊಡಬೇಕು ಅನ್ನೋದನ್ನು ಹೈಕಮಾಂಡ್​​ ನಿರ್ಧರಿಸುತ್ತೆ ಎಂಬ ಅರಿವು ಪ್ರತಾಪ್ ಸಿಂಹಗೆ ಇರಬೇಕಿತ್ತು. ನಾನು ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಪಕ್ಷದ ಇತಿ‌ಮಿತಿ‌ ಮೀರಿ ಯಾರೂ ವರ್ತಿಸಬಾರದು, ಸಾರ್ವಜನಿಕರಿಗೆ ಗೊಂದಲ ಮೂಡಿಸಬಾರದು ಅಂತ ಕಿಡಿಕಾರಿದ್ದಾರೆ..
‘ಟಿಕೆಟ್ ಹೈಕಮಾಂಡ್ ತೀರ್ಮಾನಿಸುತ್ತೆ’ . ‘ಜನರಿಗೆ ಗೊಂದಲ ಮೂಡಿಸಬಾರದು’ ‘ನನ್ನ ಹೋರಾಟ ಈ ಕ್ಷೇತ್ರದಲ್ಲೇ’ ಎಂದು ಚಾಮರಾಜ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಎಲ್‌.ನಾಗೇಂದ್ರ ಹೇಳಿದ್ದಾರೆ.

ಒಟ್ಟಾರೆ, 1978ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡ ಚಾಮರಾಜ ಕ್ಷೇತ್ರ ದೊಡ್ಡ ಮತದಾರರ ಸಂಖ್ಯೆ ಹೊಂದಿದೆ.. ಅರಮನೆ, ಚಾಮುಂಡಿಬೆಟ್ಟ ಸೇರಿ ಮೈಸೂರಿನ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ.. ಹೀಗಾಗಿ ಚಾಮರಾಜ ಕ್ಷೇತ್ರ ಪಡೆಯಲು ಪೈಪೋಟಿ ಶುರುವಾಗಿದೆ. ಎಲ್​.ನಾಗೇಂದ್ರ ಒಂದು ಬಾರಿ ಶಾಸಕ, ಮೂರು ಬಾರಿ ಪಾಲಿಕೆ ಸದಸ್ಯ, ಮೇಯರ್ ಹಾಗೂ ಮೂಡಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು ಕಳೆದ 30 ವರ್ಷಗಳಿಂದ ಪಕ್ಷದಲ್ಲಿದ್ದಾರೆ.. ಇನ್ನು ಎರಡು ಬಾರಿ ಸಂಸದರಾಗಿರೋ ಪ್ರತಾಪ್​ಸಿಂಹಗೂ ಭಾರಿ ವರ್ಚಸ್ಸು ಇದೆ.. ಪ್ರತಾಪ್ ಸಿಂಹ ಟಿಕೆಟ್ ಆಸೆ ಕೈಗೂಡುತ್ತಾ ಅನ್ನೋದು 2028ರಲ್ಲಿ ಬಯಲಾಗಲಿದೆ.

Share This Article