ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದಿದ್ದ ದೈತ್ಯ ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
2025ರ ಅಕ್ಟೋಬರ್ 3ರಂದು ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಅರಣ್ಯಾಧಿಕಾರಿಗಳು ಪ್ರಮುಖ ಆರೋಪಿ ಗೋವಿಂದ ನನ್ನ ಮೈಸೂರಿನಲ್ಲಿ ಬಂಧಿಸಿದ್ದಾರೆ.
ಮಿನಿ ವೀರಪ್ಪನ್ ಬಂಧಿಸಿದ್ದೇ ರೋಚಕ!
ಹುಲಿ ಹತ್ಯೆ ಬಳಿಕ ಆರೋಪಿ ಗೋವಿಂದ ತಲೆ ಮರೆಸಿಕೊಂಡಿದ್ದ. ಆದ್ರೆ ಹಳೆಯ ಕೇಸ್ ಹಿನ್ನೆಲೆ ಮೈಸೂರು ನ್ಯಾಯಾಲಯಕ್ಕೆ ಹೋಗುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಣ್ಯಾಧಿಕಾರಿಗಳು ಕೋರ್ಟ್ ಆವರಣದಲ್ಲಿ ಅಲರ್ಟ್ ಆಗಿದ್ದರು. ಆದಾಗ್ಯೂ ಅಧಿಕಾರಿಗಳ ಕಣ್ತಪ್ಪಿಸಿ ಕೋರ್ಟ್ ಆವರಣದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ, ಟ್ರೈನ್ ಹತ್ತಿ ಬೇರೆಡೆಗೆ ಹೋಗಲು ಪ್ರಯತ್ನಿಸಿದ್ದ, ಆದ್ರೆ ಆರೋಪಿಯನ್ನ ಬೆನ್ನತ್ತಿದ ಸಿಬ್ಬಂದಿ ಬಂಧಿಸುವಲ್ಲ ಯಶಸ್ವಿಯಾಗಿದ್ದಾರೆ.
ಕೆಡಿಪಿ ಸಭೆ ಹಾಗೂ ಅರಣ್ಯ ಸಚಿವರ ನೇತೃತ್ವದ ಸಭೆಯಲ್ಲೂ ಎರಡು ಬಾರಿ ಮಿನಿ ವೀರಪ್ಪನ್ ವಿಚಾರ ಪ್ರಸ್ತಾಪವಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯುವಂತೆ ಒತ್ತಾಯ ಕೇಳಿಬರುತ್ತಲೇ ಇತ್ತು. ಈಗ ಪ್ರಮುಖ ಆರೋಪಿಯ ಬಂಧನವಾಗಿದೆ.
ಶಿಕಾರಿ ಮಾಡೋದೇ ಅಭ್ಯಾಸ ಮಾಡ್ಕೊಂಡಿದ್ದ
ಪ್ರಮುಖ ಆರೋಪಿ ಗೋವಿಂದ ಅರಣ್ಯದಲ್ಲಿ ಶಿಕಾರಿ ಮಾಡೋದನ್ನೇ ಅಭ್ಯಾಸ ಮಾಡಿಕೊಂಡಿದ್ದನಂತೆ. ಗುಂಪು ಕಟ್ಟಿಕೊಂಡು ಹೋಗಿ ಶಿಕಾರಿ ಮಾಡ್ತಿದ್ದನಂತೆ. ಈತನ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೂ ಹಿಂದಿನ ಪ್ರಕರಣದಲ್ಲಿ ಹಸುವಿನ ಮಾಲೀಕ ಚಂದು, ಸಿದ್ದರಾಜು, ಸಂಪು, ಗಣೇಶ ಎಂಬುವವರನ್ನ ಬಂಧಿಸಲಾಗಿತ್ತು.
ಏನಿದು ಕೇಸ್?
ಕಳೆದ ಅಕ್ಟೋಬರ್ 3ರಂದು ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿತ್ತು. ಸಿಕ್ಕಿರುವ ಕಳೇಬರದ ಭಾಗದಲ್ಲಿ ಉಗುರು ಮತ್ತು ಹಲ್ಲುಗಳು ಸೇಫ್ ಆಗಿದ್ದವು. ಹುಲಿಯ ಕಳ್ಳಬೇಟೆ ಶಂಕೆ ಶಂಕೆ ವ್ಯಕ್ತವಾಗಿತ್ತು. ತನಿಖೆಗೆ ಅರಣ್ಯ ಇಲಾಖೆ ಕ್ರಮವಹಿಸಿತ್ತು. ಹುಲಿ ದೇಹದ ಉಳಿದ ಭಾಗಗಳನ್ನು ಹುಡುಕಿ, ಕೆಲವರನ್ನ ಬಂಧಿಸಿತ್ತು.
ಈ ಹುಲಿಯ ಹತ್ಯೆ ನಡೆದಿರುವುದು ಪ್ರತೀಕಾರಕ್ಕೆ, ಸತ್ತ ಹುಲಿಯನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರಣ 3 ಭಾಗಗಳಾಗಿ ತುಂಡರಿಸಿ ಸಾಗಿಸುವ ಯತ್ನ ಮಾಡಿದ್ದರು ಎನ್ನಲಾಗಿತ್ತು. 2 ಭಾಗಗಳನ್ನು ಒಂದು ಪೊಟರೆಯಲ್ಲಿಟ್ಟು ಅದರ ಮೇಲೆ ಎಲೆಗಳನ್ನು ಮುಚ್ಚಿದ್ದರು. ಮತ್ತೊಂದು ಭಾಗವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿದ್ದರು. ಈ ಹುಲಿಯ ಹತ್ಯೆಯ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ದುರುಳರು ಸಖತ್ ಪ್ಲ್ಯಾನ್ ಮಾಡಿದ್ದರು ಅನ್ನೋದು ತನಿಖೆ ವೇಳೆ ಗೊತ್ತಾಗಿತ್ತು.
