Ad image

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ – ಪ್ರಕರಣ ಸಿಐಡಿಗೆ ವಹಿಸಲು ಸರ್ಕಾರ ಚಿಂತನೆ

Team SanjeMugilu
2 Min Read

ಹುಬ್ಬಳ್ಳಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಬಂಧನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ನೀಡುವ ಸಾಧ್ಯತೆ ಇದೆ. ಮಹಿಳೆಯನ್ನು ವಿವಸ್ತ್ರಗೊಳಿಸಿದ ಬಗ್ಗೆ ಹಾಗೂ ಬಿಎಲ್‌ಓ ಸರ್ವೇ ವೇಳೆ ಹಲ್ಲೆ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡಲು ಮುಂದಾಗಿದೆ. ಇದರ ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದಲ್ಲಿ ಎಂಟ್ರಿ ಕೊಡುವ ಸಾಧ್ಯತೆ ಕೂಡ ಬಲವಾಗಿದೆ.

ಇಡೀ ದೇಶದಲ್ಲೇ ಸುದ್ದಿಯಾಗಿರುವ ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತçಗೊಳಿಸಿ ಬಂಧನ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ಒಂದು ಕಡೆ ಬಿಜೆಪಿ ಒತ್ತಾಯ, ಇನ್ನೊಂದು ಕಡೆ ರಾಜ್ಯದಲ್ಲಿ ಎದ್ದಿರುವ ಆಕ್ರೋಶ ಸರ್ಕಾರಕ್ಕೆ ಇರಿಸುಮುರಿಸು ತಂದ ಬೆನ್ನಲ್ಲೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ಚಿಂತನೆಯಲ್ಲಿದೆ.

ಮೊದಲಿಗೆ ಬಿಎಲ್‌ಓ ನಂದಿನಿ ಸರ್ವೇಗೆ ಹೋದ ಸಮಯದಲ್ಲಿ ಆರಂಭವಾಗಿರುವ ಗಲಾಟೆ ಈಗ ಈ ಮಟ್ಟಕ್ಕೆ ಬೆಳೆದು ರಾಷ್ಟ್ರಮಟ್ಟಕ್ಕೆ ಬಂದು ನಿಂತಿದೆ. ಹುಬ್ಬಳ್ಳಿ ಪೊಲೀಸರ ವರ್ತನೆಯನ್ನು ಜನ ಕಟುವಾಗಿ ಟೀಕೆ ಮಾಡುವಂತಾಗಿದೆ. ಹೀಗಾಗಿ ಮೊದಲಿಗೆ ಯಾಕೆ ಸರ್ವೇ ದಿನ ಜಗಳ ಆರಂಭವಾಯಿತು. ನಿಜವಾಗಿಯೂ ಸುಜಾತ ಮತ್ತು ಆಕೆ ಸಹೋದರರು ಬಿಎಲ್‌ಓ ಅಲ್ಲದೆ, ಇದರಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಪಾತ್ರವೇನು ಎಂಬುದರ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದೆ.

ಸುಜಾತ ಬಂಧನದ ವೇಳೆ ಕೇಶ್ವಾಪುರ ಪೊಲೀಸರು ನಡೆದುಕೊಂಡಿರುವ ರೀತಿ, ನಿಜವಾಗಿಯೂ ಬಟ್ಟೆ ಬಿಚ್ಚಿದವರು ಯಾರು? ಅಷ್ಟು ಸಿಬ್ಬಂದಿ ಜೊತೆಗೆ ಯಾಕೆ ಸುಜಾತ ಮನೆಗೆ ಹೋದರು? ಒಂದೇ ವಾರದ ಅಂತರದಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್ ಯಾಕೆ ಇನ್ಸ್‌ಪೆಕ್ಟರ್ ದಾಖಲು ಮಾಡಿದರು? ಇನ್ನೂ ವೀಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಸಿಐಡಿ ಮುಂದಾಗಬಹುದು.

ಇದರ ಜೊತೆಗೆ ಪ್ರಕರಣ ಆರಂಭದಿಂದಲೂ ತೇಪೆ ಹಚ್ಚುವ ಕಾರ್ಯಮಾಡಿದ ಹುಬ್ಬಳ್ಳಿ ಪೊಲೀಸರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ ಯಾವ ಸಮಯದಲ್ಲಿ ಬೇಕಾದರೂ ಹುಬ್ಬಳ್ಳಿಗೆ ಎಂಟ್ರಿ ನೀಡಿ, ಪ್ರಕರಣದ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಇದು ಪೊಲೀಸರನ್ನು ಇಕ್ಕಟಿಗೆ ಸಿಲುಕುವಂತೆ ಮಾಡಿದೆ. ಹೀಗಾಗಿಯೇ ಇನ್ಸ್‌ಪೆಕ್ಟರ್ ಎಸ್‌ಕೆ ಹಟ್ಟಿ ವರ್ಗಾವಣೆ, ಎಸಿಪಿ ನೇತೃತ್ವದಲ್ಲಿ ವಿಶೇಷ ತನಿಖೆ ನಡೆಸಲು ಮುಂದಾಗಿದೆ.

Share This Article