Ad image

ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ

Team SanjeMugilu
2 Min Read

ಕೊಪ್ಪಳ: ತುಂಗಭದ್ರಾ ಜಲಾಶಯ 4 ಜಿಲ್ಲೆಯ ಜನರ ದಾಹ ನೀಗಿಸುವ, ಅನ್ನದಾತರ ಬದುಕನ್ನು ಹಸಿರಾಗಿಸುವ ಒಡಲು. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಟಿಬಿ ಡ್ಯಾಮ್​ ಗೇಟ್ ಅಳವಡಿಕೆಯ ವಿಚಾರ ಮತ್ತೊಮ್ಮೆ ಸದ್ದು ಮಾಡಿದೆ. ಮಳೆಗಾಲದಲ್ಲಿ ಜಲಾಶಯದ 19ನೇ ಕ್ರೆಸ್ಟ್​ ಗೇಟ್ ಕೊಚ್ಚಿ ಹೋಗಿತ್ತು. ಅಲ್ಲದೇ, ಜಲಾಶಯದ 6 ಗೇಟ್​ಗಳಿಗೆ ಹಾನಿಯಾಗಿವೆ ಎಂಬುದು ತಿಳಿದುಬಂದಿತ್ತು. ಹೀಗಾಗಿ ರಾಜ್ಯ ಸರ್ಕಾರ 54 ಕೋಟಿ ರೂ. ವೆಚ್ಚದಲ್ಲಿ 33 ಕ್ರೆಸ್ಟ್ ಗೇಟ್​ಗಳ ಬದಲಾವಣೆಗೆ ಆದೇಶ ನೀಡಿತ್ತು. ಗುಜರಾತ್ ಮೂಲದ ಕಂಪನಿಗೆ ಗೇಟ್ ಅಳವಡಿಕೆಗೆ ಟೆಂಡರ್ ನೀಡಲಾಗಿದ್ದು ಡಿಸೆಂಬರ್​​​ನಲ್ಲಿ ಕಾಮಗಾರಿ ಆರಂಭವಾಗಿದೆ.

ಗೇಟ್ 18ಕ್ಕೆ ಮಾತ್ರ ಕ್ರೆಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ಇನ್ನೂ 32 ಕ್ರೆಸ್ಟ್ ಗೇಟ್ ಅಳವಡಿಕೆ ಬಾಕಿ ಇದೆ. ಗೇಟ್ ಕಾಮಗಾರಿಗೆ ನೀಡಿದ್ದ 10 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.

ಆಂಧ್ರ, ತೆಲಂಗಾಣದಿಂದಲೂ ಹಣ
ರಾಜ್ಯ ಸರ್ಕಾರ ಟಿಬಿ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾಮಗಾರಿಗೆ 10 ಕೋಟಿ ರೂ. ನೀಡಿತ್ತು. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ 25 ಕೋಟಿ ರೂ. ನೀಡಿವೆ ಎನ್ನಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ 10 ಕೋಟಿ ರೂ. ವಾಪಸ್ ಪಡೆದಿದೆ ಎಂಬ ಆರೋಪವಿದೆ. ಅಧಿಕಾರಿಗಳು, ಎಲ್ಲವೂ ಟಿಬಿ ಬೋರ್ಡ್​​ಗೆ ಗೊತ್ತಿದೆ ಎನ್ನುತ್ತಿದ್ದಾರೆ.

ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಆರೋಪವನ್ನು ತಳ್ಳಿಹಾಕಿದ್ದು ನಾವು ಹಣ ವಾಪಸ್ ಪಡೆದಿಲ್ಲ. ಆದರೆ ಖಜಾನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗಿದ್ದರೂ ಹಣ ಕೊಡಲೇಬೇಕು. ಫೆಬ್ರವರಿ ಅಂತ್ಯಕ್ಕೆ 6 ಕ್ರೆಸ್ಟ್ ಗೇಟ್​​ ಫಿಕ್ಸ್ ಮಾಡುತ್ತೇವೆ ಎಂದಿದ್ದಾರೆ.

ಈಗಾಗಲೇ 2ನೇ ಬೆಳೆಗೆ ಟಿಬಿ ಡ್ಯಾಮ್​ನಿಂದ ರೈತರಿಗೆ ನೀರು ಕೊಟ್ಟಿಲ್ಲ. ಹಣ ನೀಡದಿದ್ದರೆ ಕಾಮಗಾರಿ ವಿಳಂಬ ಆಗಲಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಹಣ ವಾಪಸ್ ಪಡೆದಿರುವ ಆರೋಪದಿಂದ ಇದೀಗ ರಾಜಕೀಯ ಕದನ ಏರ್ಪಟ್ಟಿದ್ದು, ಇದು ಇನ್ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Share This Article