Ad image

4 ಲಕ್ಷಕ್ಕಾಗಿ ಹೆತ್ತವರನ್ನೇ ಮುಗಿಸಿದ ‘ಅಮೆರಿಕ ರಿಟರ್ನ್’ ಮಗ.. ನಿವೃತ್ತ ನೇವಿ ಅಧಿಕಾರಿ, ವೈದ್ಯೆ ಕೇಸ್​ಗೆ ಟ್ವಿಸ್ಟ್..!

Team SanjeMugilu
2 Min Read

ಬೆಂಗಳೂರು: ವಿದ್ಯಾಭ್ಯಾಸಕ್ಕೆಂದು ಅಮೆರಿಕಗೆ ಕಳುಹಿಸಿ, ಪ್ರೀತಿಯಿಂದ ಸಾಕಿ ಬೆಳೆಸಿದ ಮಗನೇ ಹೆತ್ತವರ ಪಾಲಿಗೆ ಯಮನಾಗಿದ್ದಾನೆ. ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದಿದ್ದ ನಿವೃತ್ತ ನೇವಿ ಅಧಿಕಾರಿ ಮತ್ತು ದಂತ ವೈದ್ಯೆಯ ಜೋಡಿ ಕೊ*ಲೆ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಬರೀ 4 ಲಕ್ಷ ರೂಪಾಯಿ ಹಣಕ್ಕಾಗಿ ಕಿರಾತಕ ಮಗ, ಜನ್ಮ ನೀಡಿದ ತಂದೆ-ತಾಯಿಯನ್ನೇ ಭೀಕರವಾಗಿ ಹ*ತ್ಯೆಗೈದಿದ್ದಾನೆ. ವಿಚಾರಣೆ ವೇಳೆ ಆರೋಪಿ ರೋಹನ್ ಭಟ್ ನೀಡಿರುವ ಹೇಳಿಕೆಗಳು ಪೊಲೀಸರನ್ನೇ ದಂಗಾಗಿಸಿದೆ.

ಘಟನೆಯ ವಿವರ
ಮೃತ ದಂಪತಿಯಾದ ನವೀನ್ ಚಂದ್ರ ಭಟ್ (ನಿವೃತ್ತ ನೇವಿ ಕ್ಯಾಪ್ಟನ್) ಮತ್ತು ಡಾ. ಶ್ಯಾಮಲಾ (ದಂತ ವೈದ್ಯೆ) ತಮ್ಮ ಮಗ ರೋಹನ್ ಭಟ್‌ನನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಗೆ ಕಳುಹಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ಬಂದಿದ್ದ ರೋಹನ್, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಖಾಲಿ ಕುಳಿತಿದ್ದ. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಕಳೆದ ವರ್ಷವಷ್ಟೇ ತಂದೆಯ ಜೊತೆ ಜಗಳ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಿದ್ದ ರೋಹನ್, ಇತ್ತೀಚೆಗೆ ಮತ್ತೆ ಬಂದು ಪೋಷಕರ ಜೊತೆ ವಾಸವಿದ್ದ.

4 ಲಕ್ಷಕ್ಕಾಗಿ ನಡೀತು ರಕ್ತಪಾತ
ಮೂಲಗಳ ಪ್ರಕಾರ, ರೋಹನ್ ತನ್ನ ತಂದೆ-ತಾಯಿಯ ಬಳಿ 4 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಕೆಲಸವಿಲ್ಲದೆ ಅಲೆಯುತ್ತಿದ್ದ ಮಗನಿಗೆ ಪೋಷಕರು ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೋಹನ್, ತಂದೆಯ ಪಕ್ಕೆಲುಬಿಗೆ ಮತ್ತು ತಾಯಿಯ ಕತ್ತಿನ ಭಾಗಕ್ಕೆ ಚಾಕು ಇರಿದು ಬರ್ಬರವಾಗಿ ಕೊ*ಲೆ ಮಾಡಿದ್ದಾನೆ.

ಪೊಲೀಸ್ ವಿಚಾರಣೆಯಲ್ಲಿ ವಿಚಿತ್ರ ವರ್ತನೆ
ಬಂಧಿತ ಆರೋಪಿ ರೋಹನ್ ಭಟ್, ಪೊಲೀಸ್ ವಿಚಾರಣೆ ವೇಳೆ ಮಾನಸಿಕ ಅಸ್ವಸ್ಥನಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎನ್ನಲಾಗಿದೆ. ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುವಂತೆ ಹಲವು ಕಾರಣಗಳನ್ನು ನೀಡಿದ್ದಾನೆ.

ರೋಹನ್ ಬಾಯ್ಬಿಟ್ಟ ಭಯಾನಕ ಸಂಗತಿಗಳೇನು?
ನಿದ್ದೆ ಮಾತ್ರೆ ಆರೋಪ: “ಅಮ್ಮ ನನಗೆ ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಡುತ್ತಿದ್ದರು,” ಎಂದು ಆರೋಪಿಸಿದ್ದಾನೆ.
ಅವಮಾನ: “ನಾನು ಕೆಲಸಕ್ಕೆ ಹೋಗದ ಕಾರಣ ಅಪ್ಪ ಯಾವಾಗಲೂ ಬೈಯುತ್ತಿದ್ದರು. ‘ನೀನು ನಮ್ಮ ಮರ್ಯಾದೆ ಕಳೆಯೋಕೆ ಹುಟ್ಟಿದ್ಯಾ’ ಎಂದು ಹೀಯಾಳಿಸುತ್ತಿದ್ದರು.”

ಕೆಲಸದವರ ಮುಂದೆ ಹೀಯಾಳಿಕೆ: “ಕೆಲಸದವರ ಮುಂದೆಯೂ ನನಗೆ ಬೈದು ಅವಮಾನ ಮಾಡುತ್ತಿದ್ದರು. ಹಣ ಕೇಳಿದಾಗಲೆಲ್ಲಾ ಜಗಳ ತೆಗೆಯುತ್ತಿದ್ದರು,” ಎಂದು ಹೇಳಿಕೆ ನೀಡಿದ್ದಾನೆ.

ವಿದೇಶದಿಂದ ಬರಬೇಕಿದೆ ಮಗಳು
ಮೃತ ದಂಪತಿಯ ಮಗಳು ಕೂಡ ವಿದೇಶದಲ್ಲಿ ವ್ಯಾಸಂಗ ಮಾಡಿದ್ದು, ಸದ್ಯ ಅಮೆರಿಕದಲ್ಲಿ ವಾಸವಾಗಿದ್ದಾರೆ. ಆಕೆ ಭಾರತಕ್ಕೆ ಬಂದ ನಂತರವೇ ನವೀನ್ ಚಂದ್ರ ಭಟ್ ಮತ್ತು ಶ್ಯಾಮಲಾ ಅವರ ಮರಣೋತ್ತರ ಪರೀಕ್ಷೆ  ಮತ್ತು ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article