ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಅಪಘಾತಗಳು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಂದ ಆಗುತ್ತಿವೆ. ಈ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದು, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆಎರಡನೇ ಪತ್ರ ಬರೆದಿದ್ದಾರೆ.
ಬೆಂಗಳೂರಿಗರ ಪ್ರಮುಖ ಸಂಚಾರನಾಡಿಯೆಂದರೆ ಅದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಥವಾ ಬಿಎಂಟಿಸಿ ಬಸ್ಗಳು. ಪ್ರತಿನಿತ್ಯ ಲಕ್ಷಾಂತರ ಮಂದಿ ಬಿಎಂಟಿಸಿ ಬಸ್ಗಳನ್ನೇ ಅವಲಂಬಿಸಿದ್ದಾರೆ. ಬಿಎಂಟಿಸಿಯಲ್ಲಿ 6 ಸಾವಿರಕ್ಕೂ ಹೆಚ್ಚು ಬಸ್ಗಳಿದ್ದು, ಅದರಲ್ಲಿ ಸುಮಾರು 1,700 ಬಸ್ಗಳು ಎಲೆಕ್ಟಿçಕ್ ಬಸ್ಗಳಾಗಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ಇವಿ ಬಸ್ಗಳಿಂದ ಅತೀ ಹೆಚ್ಚಾಗಿ ಅಪಘಾತಗಳು, ಬ್ರೇಕ್ ಫೇಲ್ಗಳಾಗುತ್ತಿವೆ. ಈ ಬಸ್ಗಳನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ಜಿಸಿಸಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಓಡಿಸುತ್ತಿದೆ. ಈ ಬಸ್ಗಳಲ್ಲಿ ಡ್ರೈವರ್ಗಳನ್ನು ಕಂಪನಿಯೇ ತುಂಬಿಕೊಳ್ಳುತ್ತಿದೆ. ಹೀಗಾಗಿ ಅಪಘಾತ ಮಾಡಿದ ಡ್ರೈವರ್ ವಿರುದ್ಧವೂ ಯಾವುದೇ ಕ್ರಮವಾಗುತ್ತಿಲ್ಲ. ಜೊತೆಗೆ ಎಲೆಕ್ಟ್ರಿಕ್ ಬಸ್ಗಳ ನಿರ್ವಹಣೆ ಕೊರತೆಯಿಂದ, ಬ್ಯಾಟರಿ ಸಮಸ್ಯೆಯಿಂದ ಬಿಎಂಟಿಸಿ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಎಲೆಕ್ಟ್ರಿಕ್ ಬಸ್ಗಳಲ್ಲಿ ಹೆಚ್ಚಾಗಿ ಬ್ರೇಕ್ ಡೌನ್ ಆಗುತ್ತಿವೆ. ಇವಿ ಬಸ್ಗಳು ಒಂದು ದಿನಕ್ಕೆ 200 ಕಿಲೋಮೀಟರ್ ಓಡಬೇಕು ಅಂತಾ ಇದೆ. ಆದರೆ 100-120 ಕಿಲೋಮೀಟರ್ ಮಾತ್ರ ಬ್ಯಾಟರಿ ಬರುತ್ತಿದೆ. ಪದೇ ಪದೇ ಕೆಟ್ಟು ನಿಲ್ಲುತ್ತಿವೆ ಎಂದು ಸಾರಿಗೆ ಸಚಿವರು ಕಿಡಿಕಾರಿದ್ದಾರೆ. ಜೊತೆಗೆ 5-6 ತಿಂಗಳ ಹಿಂದೆ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿದ್ದೆ. ಆದರೆ 45 ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇನೆಂದು ಯಾವುದೇ ಉತ್ತರ, ಕೆಲಸವಾಗಿಲ್ಲ. ಹೀಗಾಗಿ ಎರಡನೇ ಪತ್ರ ಬರೆದಿದ್ದೇನೆ ಎಂದಿದ್ದಾರೆ.
