ದಾವಣಗೆರೆ: ಈಗ ನುಡಿದಂತೆ ನಡೆಯುವವರು ಯಾರ್ ಇರ್ತಾರೆ ಹೇಳಿ? ಗ್ರಾಮ ಪಂಚಾಯತಿ ಅಧ್ಯಕ್ಷ ಕೂಡ ಮಾತಿನ ಮೇಲೆ ನಿಲ್ಲೋದಿಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಆವರು ಮಾತನಾಡಿದರು. ಈ ವೇಳೆ, ಶಾಮನೂರು ಶಿವಶಂಕರಪ್ಪ ಅವರು ಇದೇ ಕೊನೆ ಚುನಾವಣೆ, ಮುಂದೆ ಅವರ ಕ್ಷೇತ್ರದಿಂದ ಮುಸ್ಲಿಮರಿಗೆ ಟಿಕೆಟ್ ನೀಡುವುದಾಗಿ ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಆದರೆ ಈಗ ನುಡಿದಂತೆ ನಡೆಯುವವರು ಯಾರ್ ಇರ್ತಾರೆ? ಗ್ರಾಮ ಪಂಚಾಯತಿ ಅಧ್ಯಕ್ಷ ಕೂಡ ಮಾತಿನ ಮೇಲೆ ನಿಲ್ಲಲ್ಲ. ಈ ಸಂದರ್ಭದಲ್ಲಿ ಆ ಮಾತು ಅಪ್ರಸ್ತುತ ಅಂತಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಹೇಳಿಕೆ ಗೊಂದಲಗಳಿಗೆ ಕೂಡಲೇ ಹೈಕಮಾಂಡ್ ಇದಕ್ಕೆ ಎಂಟ್ರಿಯಾಗಿ ಇತ್ಯಾರ್ಥ ಮಾಡಬೇಕಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಮೊದಲ ಬಾರಿ ಶಾಸಕರಾಗಿದ್ದೇವೆ ಹೈಕಮಾಂಡ್ ಬಳಿ ಹೋಗಿ ಮಾತನಾಡುವಷ್ಟು ದೊಡ್ಡವರಲ್ಲ. ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಡಿಕೆಶಿ ಇವತ್ತೆ ಸಿಎಂ ಆಗಲಿ ಎನ್ನುವವರಲ್ಲಿ ನಾನು ಮೊದಲಿಗ. ಅಧಿಕಾರ ಹಂಚಿಕೆ ಬಗ್ಗೆ ಈಗಾಗಲೇ ನಾನು ಹೇಳಿದ್ದೇನೆ. ಡಿಸೆಂಬರ್ನಲ್ಲಿ ಡಿಕೆಶಿ ಸಿಎಂ ಆಗುತ್ತಾರೆ ಎಂದು ರಕ್ತದಲ್ಲಿ ಬರೆದು ಕೊಡುವೆ ಎಂದಿದ್ದೆ. ಈಗಲೂ ಕೂಡ ಅದನ್ನೇ ಹೇಳುತ್ತಿದ್ದೇನೆ ಎಂದಿದ್ದಾರೆ.
ಹಿರಿಯರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ಶಾಸಕರಿಗೆ ಬೀದಿನಾಯಿ ಪದ ಬಳಕೆ ಮಾಡಿದ್ದು ಸರಿಯಲ್ಲ. ಅದು ಡಿಕೆ ಬಣ ಇರಬಹುದು ಅಥವಾ ಸಿದ್ದರಾಮಯ್ಯ ಬಣ ಇರಬಹುದು. ಶಾಸಕರನ್ನು ನಾಯಿಗೆ ಹೋಲಿಸಿದ್ದಾರೆ ಅವರು ಕೂಡ ಶಾಸಕರು ತಾನೇ ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗುವ ಅವಶ್ಯಕತೆ ಇರಲಿಲ್ಲ. ಬಜೆಟ್ಗೆ ಮುನ್ನ ವಿದೇಶ ಪ್ರವಾಸ ಹೋಗೋದು ಸರಿಯಲ್ಲ. ಅವರಿಗೂ ವೈಯಕ್ತಿಕ ಜೀವನ ಇರುತ್ತೆ ಹೋಗುತ್ತಾರೆ. ಅದನ್ನು ನಾವು ಯಾವುದೇ ಕಾರಣಕ್ಕೂ ಅಡ್ಡಿ ಪಡಿಸೋದಿಲ್ಲ. ಆದರೆ ಈ ಸಂದರ್ಭದಲ್ಲಿ ಅಗತ್ಯ ಇರಲಿಲ್ಲ ಎಂದಿದ್ದಾರೆ.
