ಬೆಂಗಳೂರು: ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಬಳಿ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಯುವಕ ಪ್ರಜ್ಞೆ ತಪ್ಪಿ ಬಿದ್ದು ಮುಕ್ಕಾಲು ಗಂಟೆ ಕಳೆದರೂ ಅಂಬುಲೆನ್ಸ್ ಬಾರದಿದ್ದಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಅಪಘಾತದಿಂದ ರಸ್ತೆಯಲ್ಲಿ ಜಲ್ಲಿಕಲ್ಲು ಚೆಲ್ಲಿದ್ದ ಕಾರಣ ಬೈಕ್ ಸ್ಕಿಡ್ ಆಗಿ ಯುವಕ ಬಿದ್ದಿದ್ದ. ಡೆಲಿವರಿ ಬಾಯ್ ಪ್ರಜ್ಞೆ ತಪ್ಪಿ ಬಿದ್ದು, 30-40 ನಿಮಿಷ ಕಳೆದರೂ ಅಂಬುಲೆನ್ಸ್ ಘಟನಾ ಸ್ಥಳಕ್ಕೆ ಬಂದಿಲ್ಲ. ಕಲಾಪ ತಡರಾತ್ರಿ ಮುಗಿದಿದ್ದರಿಂದ ಅದೇ ರಸ್ತೆಯಲ್ಲಿ ಶಾಸಕರು ಹಾಗೂ ಸಚಿವರು ಹಾದುಹೋಗಿಯೂ ಸ್ಪಂದಿಸಿಲ್ಲ ಅಂತ ಸಾರ್ವಜನಿಕರು ಕಿಡಿಕಾರಿದ್ದಾರೆ.
30 ರಿಂದ 40 ನಿಮಿಷ ಕಳೆದರೂ ಅಂಬುಲೆನ್ಸ್ ಬರಲೇ ಇಲ್ಲ. ಸಿಟಿ ಮಧ್ಯೆ ಹಾಗೂ ಸಿಎಂ ಮನೆಯ ಕೂಗಳತೆ ದೂರದಲ್ಲಿದ್ದರೂ ಅಂಬುಲೆನ್ಸ್ಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಜನಪ್ರತಿನಿಧಿಗಳು ಓಡಾಡಿದರೂ ಸ್ಪಂದಿಸಿಲ್ಲ ಎಂದು ಪೊಲೀಸರ ಮುಂದೆ ಆಕ್ರೋಶ ಹೊರಹಾಕಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಡೆಲಿವರಿ ಬಾಯ್ನನ್ನು ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
