Ad image

ರಾಜಮುಡಿ ಅಕ್ಕಿಗೆ ಶೀಘ್ರ GI ಟ್ಯಾಗ್ ನೀಡಿ: ಹಾಸನ ಸಂಸದ ಶ್ರೇಯಸ್ ಪಟೇಲ್ ಕೇಂದ್ರಕ್ಕೆ ಮನವಿ

Team SanjeMugilu
1 Min Read

ನವದೆಹಲಿ: ಹಾಸನ ಜಿಲ್ಲೆಯ ವಿಶಿಷ್ಟವಾದ ರಾಜಮುಡಿ ಅಕ್ಕಿಗೆ  ಶೀಘ್ರವಾಗಿ ಭೌಗೋಳಿಕ ಸೂಚಕ (GI) ಟ್ಯಾಗ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಾಸನ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು ಅಕ್ಕಿಯ ಮಹತ್ವವನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜೋಳ ಬೆಳೆ ಹಾನಿಯಾಗಿದ್ದರೂ, ರೈತರಿಗೆ ಇನ್ನೂ ಬೆಳೆ ಪರಿಹಾರ ದೊರೆಯದ ಬಗ್ಗೆ ಸಂಸದರು ಗಮನ ಸೆಳೆದರು. ಕಳೆದ ಜೂನ್ ಅವಧಿಯಲ್ಲಿ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಬೆಳೆ ಹಾನಿಯಾಗಿದ್ದರೂ, ಇದುವರೆಗೂ ರೈತರಿಗೆ ಯಾವುದೇ ಪರಿಹಾರ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಳಂಬದ ಬಗ್ಗೆ ಸರ್ಕಾರ ತ್ವರಿತವಾಗಿ ಗಮನ ಹರಿಸಬೇಕು ಎಂದು ಮನವಿ ಮಾಡಿದ ಅವರು, ರಾಜ್ಯ ಸರ್ಕಾರ ನೀಡುವ ಬೆಳೆ ಪರಿಹಾರವನ್ನು ಹಾಲು ಒಕ್ಕೂಟಗಳ ಮೂಲಕವೂ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ತಲುಪಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಸುಮಾರು 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಕೃಷಿ ನಡೆಯುತ್ತಿದೆ. ಈ ಬೆಳೆಗಳಿಗೆ ಸೂಕ್ತ ‘ಸಸ್ಯ ಸಂರಕ್ಷಣಾ ಯೋಜನೆ’ಯನ್ನು ಜಾರಿಗೆ ತರುವುದರ ಜೊತೆಗೆ ಜಿಲ್ಲೆಯ ಕೃಷಿ ಪ್ರಯೋಗಾಲಯಗಳ ಉನ್ನತೀಕರಣಕ್ಕೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Share This Article