Ad image

ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ

Team SanjeMugilu
2 Min Read

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಹಣೆಬರಹ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ, ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರ ಮಾತ್ರ ಬೀದಿಗೆ ಬಂದಿದ್ದು, ಪಕ್ಷದ ಒಗ್ಗಟ್ಟು ಮೂರಾಬಟ್ಟೆಯಾಗಿದೆ. ಮುಸ್ಲಿಂ ನಾಯಕರ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು ಈಗ ಸರ್ಕಾರದ ಒಳಗೂ ಸಂಚಲನ ಮೂಡಿಸಿವೆ. ಎಂಎಲ್​ಸಿ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ತಲೆದಂಡದ ವಿಚಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಸ್ಫೋಟಗೊಂಡಿದೆ.

ಸಂಪುಟ ಸಭೆಯಲ್ಲಿ ಏನೇನು ಚರ್ಚೆಯಾಯ್ತು?
ಮುಸ್ಲಿಂ ನಾಯಕರ ವಿರುದ್ಧದ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಮುಸ್ಲಿಂ ಸಮುದಾಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರೆ, ಅಬ್ದುಲ್ ಜಬ್ಬಾರ್ ಮೇಲೆ ಕ್ರಮ ಕೈಗೊಂಡಿದ್ದು ತೀರಾ ಅವಸರದ ನಿರ್ಧಾರ. ಇದು ಸಮುದಾಯವೇ ನಮಗೆ ಸವಾಲು ಹಾಕುವಂತೆ ಮಾಡಿದೆ ಎಂದು ಸತೀಶ್ ಜಾರಕಿಹೊಳಿ ವಾದಿಸಿದ್ದಾರೆ.

ಲಿಂಗಾಯತ ಸಚಿವರ ಪ್ರತಿವಾದ
ಈ ವೇಳೆ ಮಧ್ಯಪ್ರವೇಶಿಸಿದ ಲಿಂಗಾಯತ ಸಮುದಾಯದ ಸಚಿವರು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ತಪ್ಪಾದಾಗ ಕ್ರಮ ಅನಿವಾರ್ಯ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದಗಳು ತಾರಕಕ್ಕೇರುತ್ತಿದ್ದಂತೆಯೇ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಭೆಯಿಂದ ಹೊರನಡೆದ ಘಟನೆ ನಡೆದಿದೆ.

ಸಂಪುಟ ಸಭೆಯಲ್ಲಿ ಏನೇನಾಯ್ತು?
ಮುಸ್ಲಿಂ ನಾಯಕರ ಟಾರ್ಗೆಟ್: ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಮೇಲಿನ ಕ್ರಮಕ್ಕೆ ಸಂಪುಟದ ಹಲವು ಸಚಿವರಿಂದ ಅಸಮಾಧಾನ.
ಪ್ರಿಯಾಂಕ್ ಖರ್ಗೆ ಕಿಡಿ: ಮುಸ್ಲಿಂ ಸಮುದಾಯದ ಮ್ಯಾಪಿಂಗ್ ಮತ್ತು ಪ್ರಚಾರದ ವೈಫಲ್ಯಕ್ಕೆ ನಾಯಕರನ್ನು ಹೊಣೆ ಮಾಡುವುದು ಸರಿಯಲ್ಲ ಎಂದ ಸಚಿವರು.
ಸತೀಶ್ ಜಾರಕಿಹೊಳಿ ಆಕ್ಷೇಪ: ಶೀಘ್ರವಾಗಿ ಕೈಗೊಂಡ ಶಿಸ್ತು ಕ್ರಮದಿಂದ ಮೈನಾರಿಟಿ ಮತದಾರರ ಕೆಂಗಣ್ಣಿಗೆ ಗುರಿಯಾಗುವ ಭೀತಿ.
ನಾಯಕರ ವಾಕ್ಸಮರ: ಲಿಂಗಾಯತ ಮತ್ತು ಮುಸ್ಲಿಂ ನಾಯಕರ ಪರ ವಾದ ಮಂಡಿಸಿದ ಸಚಿವರ ನಡುವೆ ಸಂಘರ್ಷ; ಸಭೆಯಿಂದ ಹೊರನಡೆದ ಡಿಕೆಶಿ ಮತ್ತು ಮಲ್ಲಿಕಾರ್ಜುನ್.

ಸಿಎಂ ಸಮಾಧಾನದ ತಂತ್ರ
ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಮಾತನಾಡಿ, ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿಯುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸಮಾಧಾನದ ಸಂದೇಶ ರವಾನಿಸಲು ಯತ್ನಿಸಿದ್ದಾರೆ.

Share This Article