Ad image

ಖಾಸಗಿ ಸ್ಥಳದಲ್ಲಿ ಕೆಲ ಸಚಿವರ ಸಭೆ: ಕುತೂಹಲ ಮೂಡಿಸಿದ ‘ಕೈ’ ನಾಯಕರ ನಡೆ

Team SanjeMugilu
2 Min Read

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನವೆಂಬರ್​ ಕ್ರಾಂತಿ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ  ವಿಚಾರವೂ ಚರ್ಚೆಯಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಖಾಸಗಿ ಸ್ಥಳದಲ್ಲಿ ಕೆಲ ಸಚಿವರು ಮೀಟಿಂಗ್​ ನಡೆಸಿರೋದು ಭಾರೀ ಕುತೂಹಲ ಮೂಡಿಸಿದೆ. ಅ.13ರಂದು ಸಿಎಂ ಸಿದ್ದರಾಮಯ್ಯ ಡಿನ್ನರ್ ಆಯೋಜಿಸಿರುವ ಬೆನ್ನಲ್ಲೇ ಈ ಸಭೆ ನಡೆದಿರೋದು ಯಾಕೆ ಎಂಬ ಪ್ರಶ್ನೆ ಎದ್ದಿದೆ.

ಗೃಜ ಸಚಿವ ಡಾ.ಜಿ. ಪರಮೇಶ್ವರ್​ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒನ್ ಟು ಒನ್ ಮೀಟಿಂಗ್ ನಡೆಸಿದ್ದು, ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಬಳಿಕ ಸಚಿವ ಮಹದೇವಪ್ಪ ಕೂಡ ಸಾಥ್ ನೀಡಿದ್ದು, ಇದು ಮೀಟಿಂಗ್ ಅಲ್ಲ ಕೇವಲ ಈಟಿಂಗ್ ಎಂದು ಹೇಳಿ ಮೂವರು ಸಚಿವರು ತೆರಳಿದ್ದಾರೆ. ಇನ್ನು ಸಚಿವರಿಗೆ ಸಿಎಂ ಔತಣಕೂಟ ಆಯೋಜಿಸಿರುವ ವಿಚಾರ ಸಂಬಂಧ ವಿಧಾನಸೌಧದಲ್ಲಿ ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ ವಿಚಾರ ನನಗೆ ಗೊತ್ತಿಲ್ಲ. ಆದರೆ ಇದಕ್ಕೂ ಮುನ್ನ ಎರಡ್ಮೂರು ಬಾರಿ ಕರೆದಿದ್ದಾರೆ. ಆಗ ಸರ್ಕಾರದ ಕಾರ್ಯಕ್ರಮಗಳು, ಅಭಿವೃದ್ಧಿ, ಪಕ್ಷದ ಸಂಘಟನೆ, ಸ್ಥಳೀಯ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ, ಈಗಲೂ ಅದೇ ಇರಬಹುದು. ಸಂಪುಟ ಪುನಾರಚನೆ ಬೇರೆ, ಅದಕ್ಕೂ ಔತಣಕೂಟಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಎರಡೂವರೆ ವರ್ಷ ಆದ್ಮೇಲೆ ಅವಕಾಶ ನೀಡುತ್ತೇವೆ ಎಂದು ಖರ್ಗೆ, ರಾಹುಲ್, ಸಿದ್ದರಾಮಯ್ಯ & ಡಿಕೆಶಿ ಅವರು ಮಾತು ಕೊಟ್ಟಿದ್ದರು. ನಮ್ಮ ಕೋಲಾರ ಜಿಲ್ಲೆಯಲ್ಲಿ ನಾನೇ ಸೀನಿಯರ್ ಇದ್ದೇನೆ. ನನಗೂ ಅವಕಾಶ ಮಾಡಿಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಬಲಗೈ ಸಮುದಾಯಕ್ಕೆ ಅವಕಾಶ ಸಿಗಬೇಕು ಎಂದು ಬೆಂಗಳೂರಿನಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿದ್ದಾರೆ.

‘ಸಿಎಂ ಬಗ್ಗೆ ನನಗೆ ವಿಶ್ವಾಸ ಇದೆ’
ಮತ್ತೊಂದೆಡೆ ಮತ್ತೆ ಸಚಿವ ಸ್ಥಾನ ಸಿಗುವ ಬಗ್ಗೆ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದ್ದು, ಬಿಹಾರ ಚುನಾವಣೆ ಮುಗಿಯುವ ತನಕ ಸುಮ್ಮನೇ ಇದ್ದು ಬಿಡಿ. ಸಿಎಂ ಬಗ್ಗೆ ನನಗೆ ವಿಶ್ವಾಸ ಇದೆ ಎಂದಿದ್ದಾರೆ. ಮಂತ್ರಿ ಸ್ಥಾನ ಕೊಡಿ ಅಂತಾ ಯಾರನ್ನೂ ಕೇಳಲು ಹೋಗಿಲ್ಲ. 2018ರಲ್ಲಿ ನೀನು ಸೋತು ಬಿಟ್ಟೆ, ಇಲ್ಲದಿದ್ರೆ ಮಂತ್ರಿ ಮಾಡ್ತಿದ್ದೆ. ನಿನ್ನ ಜಾಗದಲ್ಲಿ ತುಕಾರಾಂ ಮಂತ್ರಿ ಮಾಡ್ದೆ ಅಂತಾ ಈ ಹಿಂದೆ ಸಿದ್ದರಾಮಯ್ಯ ನನ್ನ ಬಳಿ ಒಂದು ಸಲ ಹೇಳಿದ್ದರು. ಈ ಚುನಾವಣೆಯಲ್ಲಿ ಗೆದ್ದಾಗ ಸಹಕಾರ ಖಾತೆ ಕೊಡಿ ಎಂದಿದ್ದೆ. ನನ್ನ ಅನುಭವದ ಆಧಾರದ ಮೇಲೆ ಸಹಕಾರ ಖಾತೆ ಕೊಟ್ಟಿದ್ದರು ಎಂದು ರಾಜಣ್ಣ ತಿಳಿಸಿದ್ದಾರೆ.

Share This Article