ರಾಯಚೂರು: ಸರ್ಕಾರ ಮೊದಲು ಸರ್ಕಾರಿ ಜಾಗಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಿತು. ಬಳಿಕ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟಿದೆ. ಶುಕ್ರವಾರ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ ಪ್ರವೀಣ್ ಕುಮಾರ್ರನ್ನು ಅಮಾನತು ಮಾಡಲಾಗಿದೆ. ಸದ್ಯ ಅಮಾನತು ಆಗಿರುವ ಪ್ರವೀಣ್ ಕುಮಾರ್ ಜೊತೆಗೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದು, ಆತ್ಮಸ್ತೈರ್ಯ ತುಂಬಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರು ಸಂಸದ ತೇಜಸ್ವಿ ಸೂರ್ಯ, ಶ್ರೀ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಳಿಸಿದ ಅಧಿಕಾರಿ ಶ್ರೀ ಪ್ರವೀಣ್ ಕುಮಾರ್ರೊಂದಿಗೆ ನಾನು ಮಾತನಾಡಿದ್ದು, ಈ ಕಾನೂನುಬಾಹಿರ ಮತ್ತು ಅಕ್ರಮ ಅಮಾನತನ್ನು ಪ್ರಶ್ನಿಸಲು ನಾನು ವೈಯಕ್ತಿಕವಾಗಿ ಸಂಬಂಧಪಟ್ಟ ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳ ಮುಂದೆ ಹಾಜರಾಗುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ ಎಂದರು.
ಆರ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರ ಹಕ್ಕನ್ನು ಎತ್ತಿಹಿಡಿದಿರುವ ಅನೇಕ ಹೈಕೋರ್ಟ್ಗಳ ತೀರ್ಪುಗಳಿವೆ. ಈ ಅಕ್ರಮ ಅಮಾನತು ರದ್ದಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರವು ಕಾನೂನು ಹೋರಾಟ ಬಯಸಿದರೆ, ನಾವು ತಯಾರಾಗಿದ್ದೇವೆ ಎಂದಿದ್ದಾರೆ.
ಆರೆಸ್ಸೆಸ್ ಶತಮಾನೋತ್ಸವ ಹಿನ್ನಲೆ ಅಕ್ಟೋಬರ್ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ರಾಯಚೂರಿನ ಸಿರವಾರ ತಾಲೂಕು ಲಿಂಗಸಗೂರು ಪಂಚಾಯಿತಿಯ ಪಿಡಿಓ ಪ್ರವೀಣ್ ಕುಮಾರ್ ಕೆಪಿ ಗಣವೇಶ ಧರಿಸಿ ಲಾಟಿ ಹಿಡಿದು ಭಾಗಿಯಾಗಿದ್ದರು. ಹೀಗಾಗಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸಸ್ಪೆಂಡ್ ಮಾಡಲಾಗಿದೆ. ಈ ಪಿಡಿಓ ಸಸ್ಪೆಂಡ್ ಬೆನ್ನಲ್ಲೇ ಮತ್ತಷ್ಟು ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕೋದಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.