ರಾಜ್ಯದಲ್ಲಿ ನಡೆಯುತ್ತಿದ್ದ ಜಾತಿ ಜನಗಣತಿ ಸಮೀಕ್ಷೆ ಹಿನ್ನಲೆ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜೆ ವಿಸ್ತರಣೆ ಮಾಡಿತ್ತು. ಎಲ್ಲಾ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಹೀಗಾಗಿ ಮಕ್ಕಳಿಗೆ ಮತ್ತಷ್ಟು ರಜೆ ಕೊಟ್ಟಿದ್ದರು. ಆದರೆ ಇದೀಗ ಈ ಸಮೀಕ್ಷೆ ಎಫೆಕ್ಟ್ ಮಕ್ಕಳಿಗೆ ತಟ್ಟಿದೆ ಎನ್ನಲಾಗಿದೆ. ಮಕ್ಕಳಿಗೆ ಶಾಲಾ ಸಮಯದಲ್ಲಿ ಆಟದ ಅವಧಿ ಕಡಿತ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಮಕ್ಕಳ ಶಾಲಾ ಸಮಯದಲ್ಲಿ ಆಟದ ಅವಧಿ ಕಡಿಮೆಯಾಗುತ್ತಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮೀಕ್ಷೆಯ ಪರಿಣಾಮವಾಗಿ ತರಗತಿಗಳ ಸಂಖ್ಯೆ ಹೆಚ್ಚಿಸಿ, ಆಟದ ಸಮಯ ಕಡಿಮೆ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಿಡಿದೆದ್ದಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಕಿಡಿಕಾರಿದೆ.
ಸಮೀಕ್ಷೆ ಎಫೆಕ್ಟ್, ಮಕ್ಕಳ ಆಟದ ಅವಧಿ ಕಡಿತ!
ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತರಗತಿಯ ಮಕ್ಕಳ ವೇಳಾಪಟ್ಟಿಯಲ್ಲಿ ಆಟದ ಅವಧಿ ಕಡಿತಗೊಂಡಿದೆ ಎಂದು ಆರೋಪಿಸಿದೆ. ಸ್ವತಃ ಆಯೋಗದ ಸದಸ್ಯರು ಹಲವು ಪ್ರೌಢಶಾಲೆಗಳ ಮಕ್ಕಳ ಜೊತೆ ಮಾತನಾಡಿ ಸತ್ಯ ಪರಿಶೀಲಿಸಿದ್ದಾರೆ.
ಮಕ್ಕಳು ಆಟದ ಸಮಯ ಕಡಿಮೆಯಾದ ಬಗ್ಗೆ ದೂರು ಹೇಳಿದ್ದಾರೆ. ಆಟ, ಕಲೆ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಅವಿಭಾಜ್ಯ ಅಂಗ ಎಂದು ಆಯೋಗ ಒತ್ತಿ ಹೇಳಿದೆ. ಇವುಗಳನ್ನು ಕಡಿಮೆ ಮಾಡುವುದು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಹಾನಿಕಾರಕವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಕೇವಲ ಪಾಠಗಳ ಮೇಲೆ ಒತ್ತು ನೀಡಿ ಆಟವನ್ನು ಕಡಿಮೆ ಮಾಡುವುದು ತಪ್ಪು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಮಕ್ಕಳ ಕಲಿಕೆ ಮೇಲೆ ನಕಾರಾತ್ಮಕ ಪರಿಣಾಮ ಎಂದು ಕಿಡಿ!
ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ 11 ಅನ್ನು ಅಂತರಾಷ್ಟ್ರೀಯ ಆಟದ ದಿನವೆಂದು ಗುರುತಿಸಿದೆ. ಮಕ್ಕಳ ಆಟದ ಹಕ್ಕನ್ನು ಒತ್ತಿ ಹೇಳುತ್ತದೆ. ಆದರೆ ನಮ್ಮ ಶಾಲೆಗಳಲ್ಲಿ ಆಟವನ್ನು ನಿರ್ಭಂಧಿಸುವುದು ವಿಪರ್ಯಾಸದ ಸಂಗತಿ ಎಂದು ಆಯೋಗ ಕಿಡಿಕಾರಿದೆ. ಇದು ಮಕ್ಕಳ ಕಲಿಕೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಟದಿಂದ ಮಕ್ಕಳು ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ, ಸೃಜನಶೀಲತೆ ಬೆಳೆಸಿಕೊಳ್ಳುತ್ತಾರೆ, ಸ್ನೇಹ ಬೆಳೆಸುತ್ತಾರೆ. ಆದರೆ ನೀವು ಇಂತಹ ಆಟದ ಸಮಯಕ್ಕೆ ಕತ್ತರಿ ಹಾಕಿದ್ದೀರಾ ಎಂದು ಆಯೋಗ ಸಿಡಿದೆದ್ದಿದೆ.
ಹೀಗಾಗಿ ಶಾಲಾ ಅವಧಿಯಲ್ಲಿ ಆಟದ ಅವಧಿ ಕಡ್ಡಾಯವಾಗಿ ನಿಗದಿ ಮಾಡಬೇಕು ಎಂದು ಆಯೋಗ ತಾಕೀತು ಮಾಡಿದೆ. ಸರ್ಕಾರ ತಕ್ಷಣ ಸಮೀಕ್ಷೆಯ ನಿಯಮಗಳನ್ನು ಮರುಪರಿಶೀಲಿಸಬೇಕು. ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದೆ.
ಶಿಕ್ಷಣ ಎಂದರೆ ಕೇವಲ ಪುಸ್ತಕಗಳಲ್ಲ, ಆಟವೂ ಮುಖ್ಯ!
ಈ ವಿಷಯ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪೋಷಕರು, ಶಿಕ್ಷಕರು ಮಕ್ಕಳ ಆಟದ ಹಕ್ಕಿಗೆ ಬೆಂಬಲ ನೀಡಿದ್ದಾರೆ. ಶಿಕ್ಷಣ ಎಂದರೆ ಕೇವಲ ಪುಸ್ತಕಗಳಲ್ಲ, ಆಟದ ಮೂಲಕವೂ ಕಲಿಕೆ ಆಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಸರ್ಕಾರ ಆಯೋಗದ ತಾಕೀತನ್ನು ಗಂಭೀರವಾಗಿ ಪರಿಗಣಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಮಕ್ಕಳು ಆನಂದದಿಂದ ಬೆಳೆಯಬೇಕು. ಶಾಲೆ ಒತ್ತಡದ ಕೇಂದ್ರವಲ್ಲ, ಸೃಜನಶೀಲತೆಯ ಕೇಂದ್ರವಾಗಬೇಕು. ಆಟದ ಅವಧಿ ಮರಳಿ ನೀಡಿ ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು ಎಂಬುದು ಜೋರಾಗಿದೆ.
ಜಾತಿಗಣತಿ ಸಮೀಕ್ಷೆ ಎಫೆಕ್ಟ್; ಶಾಲೆಯಲ್ಲಿ ಮಕ್ಕಳ ಆಟಕ್ಕೂ ಬಿತ್ತಾ ಬ್ರೇಕ್!?
