ಮೈಸೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ಬಂದಿರೋದು ಒಂದಲ್ಲ ಎರಡಲ್ಲ, ಐದಲ್ಲ, ಹತ್ತಲ್ಲ ಬರೋಬರಿ 21 ಹುಲಿಗಳು .
ಹೌದು. ಇತ್ತೀಚೆಗೆ ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ, ಸರಗೂರು ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಮೂವರ ರೈತರು ಬಲಿಯಾದ ಘಟನೆ ಕೂಡ ನಡೆದಿತ್ತು. ಈ ಬೆನ್ನಲ್ಲೇ ಅರಣ್ಯ ಇಲಾಖೆ ಜನರನ್ನ ಕಾಡಿದ್ದ ಹುಲಿಯನ್ನ ಸೆರೆಹಿಡಿದಿತ್ತು. ಜೊತೆಗೆ ಕಾಡಂಚಿನ ರೈತರ ರಕ್ಷಣೆಗೆ ಹಲವು ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಈ ನಡುವೆ ಒಂದಲ್ಲ ಎರಡದಲ್ಲ ಬರೋಬ್ಬರಿ 21 ಹುಲಿಗಳು ಎಂಟ್ರಿ ಕೊಟ್ಟಿವೆ. ಡಿಸಿಎಫ್ ಪರಮೇಶ್ ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.
ಹೆಚ್.ಡಿ ಕೋಟೆ, ಸರಗೂರು ಹಾಗೂ ನಂಜನಗೂಡು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಟ್ಟು 21 ಹುಲಿಗಳು ಬೀಡು ಬಿಟ್ಟಿವೆ. ಒಟ್ಟು 26 ಹುಲಿಗಳು ಕಾಡಿನಿಂದ ನಾಡಿಗೆ ಬಂದಿದ್ದವು. ಅದರಲ್ಲಿ ಐದು ಹುಲಿ ಹಿಡಿಯಲಾಗಿದೆ. ಇನ್ನೂ 21 ಹುಲಿ ನಾಡಿನಲ್ಲೇ ಓಡಾಡುತ್ತಿವೆ. ಹೀಗಾಗಿ ಜನರು ಕೂಡ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ ಎಂದು ಡಿಸಿಎಫ್ ಪರಮೇಶ್ ಹೇಳಿದ್ದಾರೆ.
ಇಂತಹ ಘಟನೆ ಇದೇ ಮೊದಲೇನಲ್ಲ 2014, 2018-19ರಲ್ಲೂ ಆಗಿದೆ, ನಾನು ಕಂಡಂತೆ ಇದು ಮೂರನೇ ಘಟನೆ. ಹುಲಿ ಸೆರೆ ಕಾರ್ಯಾಚರಣೆ ಈಗ ಹೆಡಿಯಾಲ ಉಪವಿಭಾಗದಲ್ಲಿ ಮೂರು ಕಡೆ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಮಾನವ ಜೀವ ಅತ್ಯಮೂಲ್ಯ ಆಗಿರೋದ್ರಿಂದ ಸ್ಥಳೀಯರೊಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
