ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಪೊಲೀಸರ ಕರ್ತವ್ಯಲೋಪ, ಅಕ್ರಮ ಚಟುವಟಿಕೆಗಳು ಹೆಚ್ಚಾಗ್ತಿದ್ದಂತೆ ಹಿರಿಯ ಅಧಿಕಾರಿಗಳು ಅದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ವಿವೇಕನಗರ ಪೊಲೀಸರ ವಿರುದ್ಧ ಕೇಳಿಬಂದಿದ್ದ ಲಾಕಪ್ ಡೆತ್ ಆರೋಪ ಸಂಬಂಧ ಠಾಣೆಯ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿಯನ್ನ ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ನಾಲ್ವರು ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ.
ಸಂಜಯನಗರ, ಸುಬ್ರಹ್ಮಣ್ಯ ನಗರ, ನಂದಿನಿ ಲೇಔಟ್ ಠಾಣೆ ಸಿಬ್ಬಂದಿಯನ್ನ ಅಮಾನತುಗೊಳಿಸಿ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಆದೇಶ ಹೊರಡಿಸಿದ್ದಾರೆ. ASI ಶ್ರೀನಿವಾಸ್ ಮೂರ್ತಿ(ನಂದಿನಿ ಲೇಔಟ್ ಠಾಣೆ), ASI ಜಯರಾಮೇಗೌಡ, ಹೆಡ್ ಕಾನ್ಸ್ಟೆಬಲ್ ಧರ್ಮ (ಸುಬ್ರಹ್ಮಣ್ಯ ನಗರ ಠಾಣೆ), ಕಾನ್ಸ್ಟೆಬಲ್ ನಜೀರ್ (ಸಂಜಯನಗರ ಠಾಣೆ) ಅಮಾನತ್ತಾದ ಸಿಬ್ಬಂದಿ.
ದೂರು ಪಡೆಯದ ಎಎಸ್ಐ
ದೂರು ನೀಡಲು ಬಂದ ಸಂತ್ರಸ್ತನಿಂದ ದೂರು ಪರಿಗಣಿಸದೇ ನಂದಿನಿ ಲೇಔಟ್ ಠಾಣೆಯ ಎಎಸ್ಐ ಶ್ರೀನಿವಾಸಮೂರ್ತಿ ನಿರ್ಲಕ್ಷ್ಯ ತೋರಿದ್ದರಂತೆ. ನಿತ್ಯಾನಂದ ಎಂಬುವರ ದೂರು ಪಡೆಯದೇ ಸರಿಯಾದ ಸ್ಪಂದನೆ ನೀಡದೆ ವಾಪಸ್ ಕಳಿಸಿದ್ದರಂತೆ. ಪೊಲೀಸರ ವರ್ತನೆಯಿಂದ ಬೇಸರಗೊಂಡ ದೂರುದಾರ ನಿತ್ಯಾನಂದ ಘಟನೆ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ವಿಚಾರಣೆ ನಡೆಸಿ ಇಬ್ಬರು ಎಎಸ್ಐ ಅಮಾನತುಗೊಳಿಸಿದ್ದಾರೆ.
ಕೋರ್ಟ್ ಸಮನ್ಸ್ಗೂ ನಿರ್ಲಕ್ಷ್ಯ
ಇನ್ನು ಕೋರ್ಟ್ನಿಂದ ಸಮನ್ಸ್ ಬಂದ್ರೂ ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನ ಹಾಜರುಪಡಿಸದೇ ನಿರ್ಲಕ್ಷ್ಯ ತೋರಿದ್ದ ಆರೋಪದಲ್ಲಿ ಸುಬ್ರಹ್ಮಣ್ಯನಗರ ಠಾಣೆಯ ಇಬ್ಬರು ಸಿಬ್ಬಂದಿ ಅಮಾನತಾಗಿದ್ದಾರೆ. ಪ್ರಕರಣವೊಂದರ ಸಾಕ್ಷಿಗಳನ್ನ ಹಾಜರುಪಡಿಸಲು ಕೋರ್ಟ್ ಸಮನ್ಸ್ ನೀಡಿತ್ತು. ಸಾಕ್ಷಿಗಳನ್ನ ಸರಿಯಾದ ಸಮಯಕ್ಕೆ ಕೋರ್ಟ್ಗೆ ಹಾಜರುಪಡಿಸದೇ ನಿರ್ಲಕ್ಷ್ಯ ತೋರಿದ್ದ ASI ಜಯರಾಮೇಗೌಡ ಹಾಗೂ HC ಧರ್ಮ ಅವರಿಂದ ನಿರ್ಲಕ್ಷ್ಯ ತೋರಿ ಸಸ್ಪೆಂಡ್ ಆಗಿದ್ದಾರೆ.
ಸಿಎಂ ನಿವಾಸದ ಭದ್ರತೆಗೆ ಬಾರದ ಸಿಬ್ಬಂದಿ ಸಸ್ಪೆಂಡ್
ಇದಲ್ಲದೇ ಸಿಎಂ ಕಾವೇರಿ ನಿವಾಸದ ಬಂದೋಬಸ್ತ್ಗೆ ಬಾರದೇ ಕೈಕೊಟ್ಟಿದ್ದ ಕಾನ್ಸ್ಟೇಬಲ್ ಸಹ ಅಮಾನತಾಗಿದ್ದಾರೆ. ಸಂಜಯನಗರ ಠಾಣೆ PC ನಜೀರ್ನ ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು. ಸಿಎಂ ಮನೆಗೆ ಬಂದೋಬಸ್ತ್ಗೆ ನಿಯೋಜನೆ ಮಾಡಿದ್ರೂ ಗೈರಾಗಿ ನಿರ್ಲಕ್ಷ್ಯ ತೋರಿದ್ರು. ಕರ್ತವ್ಯ ಲೋಪ ಎಸಗಿದ್ದ ಸಿಬ್ಬಂದಿ ನಜೀರ್ನನ್ನ ಅಮಾನತ್ತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಬೆಂಗಳೂರು ನಗರದಲ್ಲಿ ಕಳೆದ 15 ದಿನಗಳಿಂದ 33ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಅಮಾನತಾಗಿದ್ದಾರೆ.
