Ad image

ಶಾರುಖ್ ಖಾನ್ ಪುತ್ರನಿಂದ ಅಸಭ್ಯ ವರ್ತನೆ ಕೇಸ್ – ತನಿಖೆಗಿಳಿದ ಕಬ್ಬನ್ ಪಾರ್ಕ್ ಪೊಲೀಸರು

Team SanjeMugilu
2 Min Read

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್  ಪುತ್ರ ಆರ್ಯನ್ ಖಾನ್  ಅಸಭ್ಯವಾಗಿ ಸನ್ನೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು  ತನಿಖೆ ಶುರುಮಾಡಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿಗೆ ದಿಢೀರ್ ಭೇಟಿ ನೀಡುವ ಮೂಲಕ ಇಲ್ಲಿನ ಸಿನಿಪ್ರಿಯರಲ್ಲಿ ಮತ್ತು ಪಾರ್ಟಿ ಪ್ರಿಯರಲ್ಲಿ ಸಂಚಲನ ಮೂಡಿಸಿದ್ರು. ಆದರೆ ಈ ವೇಳೆ ಮಧ್ಯದ ಬೆರಳು ತೋರಿಸಿ ಅಸಭ್ಯ ವರ್ತನೆ ತೋರಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಪಬ್ ಮ್ಯಾನೇಜರ್‌ಅನ್ನು ಒಂದು ಗಂಟೆ ಕಾಲ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೆ ಕಾರಣ ಏನು? ದುರ್ವರ್ತನೆಗೆ ಏನು ಕಾರಣ? ಏಕಾಏಕಿ ಜನರನ್ನ ಕಂಡು ದುರ್ವರ್ತನೆ ತೋರಿದ್ಯಾಕೆ? ಜನ ಕೂಗಿದ್ದಕ್ಕೆ ದುರ್ವರ್ತನೆ ತೋರಿದ್ದಾ? ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ದುರ್ವರ್ತನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ನಡೆದಿದ್ದೇನು?
ನ.28ರಂದು ಮುಂಬೈನಿಂದ ಬೆಂಗಳೂರಿಗೆ ಬಂದಿಳಿದ ಆರ್ಯನ್ ಖಾನ್‌ಗೆ ಅದ್ಧೂರಿ ಸ್ವಾಗತವೇ ಸಿಕ್ಕಿತ್ತು. ನಗರದ ಪ್ರಮುಖ ಮತ್ತು ಜನಪ್ರಿಯ ನೈಟ್ ಸ್ಪಾಟ್ ಒಂದಕ್ಕೆ ವಿಶೇಷ ಅತಿಥಿಯಾಗಿ ಆರ್ಯನ್ ಆಗಮಿಸಿದ್ದರು. ಮೂಲಗಳ ಪ್ರಕಾರ, ಆರ್ಯನ್ ಖಾನ್ ರಾತ್ರಿ ಸರಿಯಾಗಿ 11 ಗಂಟೆಗೆ ಎಂಟ್ರಿ ಕೊಟ್ಟರು. ಸುಮಾರು 12:45ರವರೆಗೂ ಅಂದರೆ ನಡುರಾತ್ರಿಯವರೆಗೂ ಅಲ್ಲೇ ಇದ್ದು, ಬೆಂಗಳೂರಿನ ನೈಟ್ ಲೈಫ್ ಅನ್ನು ಸವಿದಿದ್ದರು. ಇದೇ ವೇಳೆ ಪಬ್‌ನ ಬಾಲ್ಕನಿಯಲ್ಲಿ ನಿಂತು ಫ್ಯಾನ್ಸ್ನತ್ತ ಆರ್ಯನ್ ಮಧ್ಯದ ಬೆರಳು ತೋರಿಸಿ ದುರ್ವರ್ತನೆ ತೋರಿದ್ದರು.

ಆರ್ಯನ್ ಖಾನ್‌ಗೆ ಸಚಿವ ಹಾಗೂ ಶಾಸಕರ ಪುತ್ರರೂ ಸಾಥ್ ಕೊಟ್ಟಿದ್ದು ಖಂಡನೀಯ. ಆರ್ಯನ್ ಖಾನ್‌ಗೆ ಜೊತೆಯಾಗಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸ್ಥಳದಲ್ಲಿದ್ರು. ಝೈದ್ ಖಾನ್ ಹಾಗೂ ನಲಪಾಡ್ ಇಬ್ಬರೂ ಆರ್ಯನ್ ಖಾನ್ ಅಕ್ಕ ಪಕ್ಕದಲ್ಲೇ ನಿಂತುಕೊಂಡಿದ್ದರು. ಆಗ ಜನರತ್ತ ಕೈಬೀಸಿದ ಆರ್ಯನ್ ಖಾನ್ ಅಸಭ್ಯವಾಗಿ ಎರಡೂ ಕೈಗಳನ್ನ ಎತ್ತಿ ಮಧ್ಯದ ಬೆರಳು ತೋರಿಸಿದ್ರು. ಆದರೆ ದುರ್ವರ್ತನೆ ತೋರಿದ ಕ್ಷಣವನ್ನ ನಲಪಾಡ್ ಹಾಗೂ ಝೈದ್ ಖಾನ್ ಇಬ್ಬರೂ ಎಂಜಾಯ್ ಮಾಡಿ ನಕ್ಕಿದ್ದರು.

ಈ ಸಂಬಂಧ ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್  ಸ್ಪಷ್ಟನೆ ಕೊಟ್ಟಿದ್ದಾರೆ. ಆರ್ಯನ್ ಖಾನ್ ಜನರನ್ನ ನೋಡಿ ಕೈ ತೋರಿಸಲಿಲ್ಲ. ಅಲ್ಲಿ ಅವರ ಸ್ನೇಹಿತರೊಬ್ಬರು ನಿಂತಿದ್ದರು. ಅವರನ್ನ ನೋಡಿ ಫ್ರೆಂಡ್‌ಶಿಪ್‌ನಲ್ಲಿ ಕೈ ತೋರಿಸಿದ್ದಾರೆ. ಆದರೂ ಜನರ ಮಧ್ಯೆ ನಿಂತು ಮಧ್ಯದ ಬೆರಳು ತೋರಿಸಿದ್ದು ತಪ್ಪು. ಆರ್ಯನ್ ಖಾನ್ ನನಗೆ ಬಹುವರ್ಷಗಳಿಂದಲೂ ಸ್ನೇಹಿತರು. ಆ ಸಂದರ್ಭಕ್ಕೆ ನನಗೆ ಅದು ತಪ್ಪು ಅನ್ನಿಸಲಿಲ್ಲ. ಜನಕ್ಕೆ ತೋರಿಸಿದ್ದರೆ ತಪ್ಪಾಗುತ್ತಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share This Article