ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದ್ದ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025 ಅನ್ನು ಶುಕ್ರವಾರ ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ತಡರಾತ್ರಿ 12:15ರ ಸುಮಾರಿಗೆ ಧ್ವನಿ ಮತದ ಮೂಲಕ ಮಸೂದೆಯನ್ನ ಅಂಗೀಕರಿಸಲಾಯಿತು.
ಮಧ್ಯರಾತ್ರಿವರೆಗೆ ನಡೆದ ಚರ್ಚೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರು ಬದಲಿಸಿ ಪರಿಚಯಿಸಲಾದ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಗದ್ದಲ ಕೋಲಾಹಲ ಏರ್ಪಟ್ಟಿತು. ಕೊನೆಗೆ ಮಸೂದೆಯನ್ನ ವಿರೋಧಿಸಿ ವಿಪಕ್ಷಗಳು ಸಭಾತ್ಯಾಗ ನಡೆಸಿದವು. ಇದರ ನಡುವೆಯೇ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಸೂದೆಗೆ ಅಂಗೀಕಾರ ಪಡೆದುಕೊಂಡರು.
ಬೆಳಗ್ಗಿನ ಜಾವದವರೆಗೂ ಧರಣಿ
ಜಿ ರಾಮ್ ಜಿ ವಿಧೇಯಕವನ್ನ ವಿರೋಧಿ ವಿಪಕ್ಷ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸಂಸತ್ತಿನಲ್ಲೇ ರಾತ್ರಿ ಕಳೆದರು. ಸಂವಿಧಾನಸದನ ಗೇಟ್ ಬಳಿಯೂ ಪ್ರತಿಭಟನೆ ನಡೆಸಿದರು. ಇದು ಬೆಳಗ್ಗಿನಜಾವದ ವರೆಗೂ ಮುಂದುವರಿಯಿತು.
