ನವದೆಹಲಿ: 77ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಇಂದು ಬೆಳಗ್ಗೆ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಬಂದ ಮೋದಿ ಅವರನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬರಮಾಡಿಕೊಂಡರು. ಬಳಿಕ ಮೋದಿ ಅವರು 2 ನಿಮಿಷ ಮೌನಾಚರಣೆ ಮಾಡಿದರು. ನಂತರ ಪುಷ್ಪಗುಚ್ಛ ಇಡುವ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನ ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು.
ಈ ವೇಳೆ ಕರ್ತವ್ಯ ಪಥದ ಪರೇಡ್ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯ ಅತಿಥಿಗಳಾಗಿದ್ದ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರೂ ಹಾಜರಿದ್ದರು. ಗಣ್ಯರ ಸ್ವಾಗತದ ಬಳಿಕ ಪ್ರಧಾನಿಗಳು ಅತಿಥಿಗಳೊಂದಿಗೆ ಮುಖ್ಯವೇದಿಕೆಗೆ ತೆರಳಿದರು. ರಾಷ್ಟ್ರಗೀತೆ ನುಡಿಸಿದ ಬಳಿಕ ಪರೇಡ್ ಶುರುವಾಯಿತು.
ರಾಷ್ಟ್ರಪತಿಗಳಿಂದ ಧ್ವಜಾರೋಹಣ
ಸಂಪ್ರದಾಯದಂತೆ ಪ್ರಧಾನಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ದೇಶೀಯ ಫಿರಂಗಿ ವ್ಯವಸ್ಥೆಯಾದ 105 ಎಂಎಂ ಲೈಟ್ ಫೀಲ್ಡ್ ಗನ್ಗಳಿಂದ 21-ಗನ್ ಸೆಲ್ಯೂಟ್ ಜೊತೆಗೆ ರಾಷ್ಟ್ರಗೀತೆ ನುಡಿಸಲಾಯಿತು. 172 ಫೀಲ್ಡ್ ರೆಜಿಮೆಂಟ್ನ 1721 ರ ಸೆರಿಮೋನಿಯಲ್ ಬ್ಯಾಟರಿಯಿಂದ 21-ಗನ್ ಸೆಲ್ಯೂಟ್ ಅನ್ನೂ ಪ್ರಸ್ತುತಪಡಿಸಲಾಯಿತು.
ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ವಂದೇ ಮಾತರಂ ಥೀಮ್ನಲ್ಲೇ ಎಲ್ಲ ಕಾರ್ಯಕ್ರಮಗಳು ಈ ಬಾರಿ ನಡೆಯುತ್ತಿವೆ. ಆಪರೇಷನ್ ಸಿಂಧೂರ ಮಿಷನ್ ಪರೇಡ್ನಲ್ಲಿ ಗಮನ ಸಳೆಯಲಿದೆ. ಇದರೊಂದಿಗೆ ದೇಶದ ಅಭೂತಪೂರ್ವ ಅಭಿವೃದ್ಧಿ ಪ್ರಗತಿ, ಬಲವಾದ ಮಿಲಿಟರಿ ಶಕ್ತಿ, ರೋಮಾಂಚನಗೊಳಿಸುವ ಸಾಂಸ್ಕೃತಿಕ ವೈವಿಧ್ಯತೆ ಇಂದಿನ ಪರೇಡ್ನಲ್ಲಿ ಪ್ರದರ್ಶನಗೊಳ್ಳಲಿದೆ.
