ಬೆಂಗಳೂರು: ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಸಕ್ರಿಯ ರಾಜಕಾರಣ ಅಖಾಡಕ್ಕೆ ರೀ ಎಂಟ್ರಿ ನೀಡಲಿದ್ದಾರೆ ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರಗೊಂಡಿತ್ತು. ಅದಕ್ಕೆ ಪೂರಕವೆಂಬಂತೆ ಇದೀಗ ಕೆಲವು ಚಟುವಟಿಕೆಗಳು ನಡೆಯುತ್ತಿರುವುದು ಕುತೂಹಲ ಹೆಚ್ಚಿಸಿದೆ. ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯ ಹಾಗೂ ಬಿಜೆಪಿಯ ಸಂಘಟನಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಹೆಗಡೆ, ಇದೀಗ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಸೂಚನೆಗಳು ಸ್ಪಷ್ಟವಾಗಿವೆ.
ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ಹಿಂದೂ ಫೈರ್ ಬ್ರ್ಯಾಂಡ್ ರಿ ಎಂಟ್ರಿ!
ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ತಮ್ಮ ಹಳೆಯ ರಣಕಣವೆಂದೇ ಗುರುತಿಸಿಕೊಂಡಿರುವ ಭಟ್ಕಳದಿಂದಲೇ ಅವರು ಸಂಘಟನಾ ಚಟುವಟಿಕೆಗೆ ಮರಳುತ್ತಿರುವುದು ಗಮನಾರ್ಹವಾಗಿದೆ. ಹಿಂದೂ ಸಂಗಮ ಆಯೋಜಕರು ಮತ್ತು ಸಂಘ ಪರಿವಾರದ ನಾಯಕರು ಹೆಗಡೆಯವರನ್ನು ಮತ್ತೆ ಅಖಾಡಕ್ಕೆ ಕರೆತರುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸಂಘ ಪರಿವಾರದ ಹಿರಿಯ ನಾಯಕರ ಮನವೊಲಿಕೆಯ ನಂತರವೇ ಹೆಗಡೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಟ್ಕಳದಲ್ಲಿ ಭರ್ಜರಿ ಸಿದ್ಧತೆ
ಅನಂತ್ ಕುಮಾರ್ ಹೆಗಡೆ ಆಗಮನದ ಹಿನ್ನಲೆಯಲ್ಲಿ ಭಟ್ಕಳದಲ್ಲಿ ಭರ್ಜರಿ ಸ್ವಾಗತದ ಸಿದ್ಧತೆಗಳು ಜೋರಾಗಿವೆ. ನಗರ ಪ್ರವೇಶಕ್ಕೂ ಮುನ್ನ ಭವ್ಯ ರೋಡ್ ಶೋ ನಡೆಸಲು ಯೋಜನೆ ರೂಪಿಸಲಾಗಿದೆ. ಭಟ್ಕಳ ಹೊರ ಭಾಗದಿಂದ ಕಾರ್ಯಕ್ರಮದ ವೇದಿಕೆಯವರೆಗೆ ನೂರಕ್ಕೂ ಹೆಚ್ಚು ಕಾರುಗಳ ರ್ಯಾಲಿ ಮೂಲಕ ಹೆಗಡೆಯವರಿಗೆ ಸ್ವಾಗತ ಕೋರುವ ಯೋಜನೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ
ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸಾಧ್ಯತೆ ಇದೆ ಎಂಬ ಬಗ್ಗೆ ಕೆಲವು ದಿನಗಳಿಂದೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಯಾಗಿತ್ತು. ಊಹಾಪೋಹಗಳೂ ಹರಿದಾಡಿದ್ದವು. ಆದರೆ, ಅಧಿಕೃತ ಮಾಹಿತಿ ಈವರೆಗೆ ಬಂದಿರಲಿಲ್ಲ. ಆದರೆ ಇದೀಗ, ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಹೆಗಡೆ ಭಾಗವಹಿಸಲು ಸಿದ್ಧರಾಗಿರುವುದು ಅವರ ರಿ ಎಂಟ್ರಿ ವದಂತಿಗಳಿಗೆ ಪುಷ್ಟಿ ನೀಡಿದೆ.
ವರ್ಷಗಳ ವಿರಾಮದ ಬಳಿಕ ಹೆಗಡೆ ರಾಜಕೀಯ ಮತ್ತು ಸಂಘಟನಾ ವೇದಿಕೆಗೆ ಮರಳುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅವರ ಎರಡನೇ ಇನಿಂಗ್ಸ್ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
