Ad image

ಕೆನಡಾದಿಂದ ಚಂದನ್ ಕುಮಾರ್ ಪಾರ್ಥಿವ ಶರೀರ ಫೆ.16 ಕ್ಕೆ ತಾಯ್ನಾಡಿಗೆ: ಸಂಸದ ಡಾ.ಕೆ.ಸುಧಾಕರ್

Team SanjeMugilu
1 Min Read
ನೆಲಮಂಗಲ: ಕೆನಡಾ  ದೇಶದ ಟೊರಾಂಟೋ ನಗರದಲ್ಲಿ ಕಳೆದ ಶನಿವಾರ ಫೆ.7 ರಂದು ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾಗಿದ್ದ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಪಾರ್ಥಿವ ಶರೀರವನ್ನ ತಾಯ್ನಾಡಿಗೆ ತರಲು ನಡೆಯುತ್ತಿದ್ದ ಪ್ರಯತ್ನ ಫಲಕಾರಿಯಾಗಿರುವುದು ಸಮಾಧಾನ ತಂದಿದೆ.

ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಈಗಷ್ಟೇ ನನಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ಫೆ.14 ರಂದು ಕೆನಡಾ ಟೊರಾಂಟೋ ನಗರದಿಂದ ಹೊರಟು ನವದೆಹಲಿಯ ಮೂಲಕ ಫೆ.16 ರಂದು ಬೆಳಗ್ಗೆ ಸುಮಾರು 8:30ರ ಸಮಯಕ್ಕೆ ಬೆಂಗಳೂರು ತಲುಪಲಿದೆ.

ನೂರ್ಕಾಲ ಬಾಳಿ ಬದುಕಬೇಕಾದ ಮಗನನ್ನ ಕಳೆದುಕೊಂಡ ಹೆತ್ತವರಿಗೆ ಮಗನ ಜೀವವನ್ನ ವಾಪಸ್‌ ತಂದುಕೊಡುವ ಶಕ್ತಿ ನಮಗಿಲ್ಲ. ಆದರೆ, ಮಗನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ತಮ್ಮ ಸಂಪ್ರದಾಯದಂತೆ ತಾಯ್ನಾಡಿನಲ್ಲಿ ಅಂತಿಮ ಸಂಸ್ಕಾರ ಮಾಡುವ ಅವಕಾಶವನ್ನಾದರೂ ಅವರಿಗೆ ಒದಗಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೆ.

ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನ ತಾಯ್ನಾಡಿಗೆ ತರಲು ಸಹಕಾರ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ಸಚಿವಾಲಯ ಮತ್ತು ಕೆನಡಾದ ಭಾರತೀಯ ಎಂಬೆಸಿಯ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಚಂದನ್ ಕುಮಾರ್ ಅವರ ಪೋಷಕರು, ಕುಟುಂಬ ಸದಸ್ಯರು ಹಾಗೂ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಹೋದರ ಚಂದನ್ ಕುಮಾರ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಟ್ವೀಟ್ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ.ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.

Share This Article