Ad image

‘ನಾನು ಸುಳ್ಳು ಆರೋಪ ಮಾಡಿದ್ದರೆ ಇಷ್ಟೆಲ್ಲಾ ಕ್ರಮ ಯಾಕೆ?’: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ

Team SanjeMugilu
2 Min Read

ಮೈಸೂರು, ಮಾರ್ಚ್​ 05: ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ ಮಾಡಿ ಪೇಚೆಗೆ ಸಿಲುಕಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕಿಡಿಕಾರಿರುವ ಕೃಷ್ಣ, ನಾನು ಯಾವಾಗಲೂ ದಾಖಲೆಗಳ ಆಧಾರದಲ್ಲೇ ವಿಷಯಗಳನ್ನು ಬಹಿರಂಗಪಡಿಸುತ್ತೇನೆ. ಆದ್ದರಿಂದಲೇ ಹಲವು ಪ್ರಕರಣಗಳಲ್ಲಿ ಇಷ್ಟೆಲ್ಲಾ ಕ್ರಮ ಕೈಗೊಂಡಿರುವುದು ಎಂದಿದ್ದಾರೆ.

ಗಿರೀಶ್ ಮಾಡಿದ್ದು ಸರಿಯಲ್ಲ ಎಂದ ಸ್ನೇಹಮಯಿ
ತಮ್ಮ ಪೋಸ್ಟ್‌ನಲ್ಲಿ ಅವರು ಹೇಳಿರುವಂತೆ, ಶಾಲಿನಿ ರಜನೀಶ್ ಅವರ ಹೆಸರು ಉಲ್ಲೇಖಿಸಿದ ಬಗ್ಗೆ ನಾನು ಈಗಾಗಲೇ ಕ್ಷಮೆ ಕೇಳಿದ್ದೇನೆ. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ನಾನು ಯಾವಾಗಲೂ ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತೇನೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಸೌಜನ್ಯ ಪ್ರಕರಣದ ಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಗಿರೀಶ್ ಮಟ್ಟಣ್ಣನವರ್ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ.

ನಾನು ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದರೆ, ನಾನು ಮೊಕದ್ದಮೆ ದಾಖಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಹೆಸರಿನಲ್ಲಿ ಪಡೆದಿದ್ದ ಸುಮಾರು 60 ಕೋಟಿ ರೂಪಾಯಿ ಮೌಲ್ಯದ 14 ನಿವೇಶನಗಳನ್ನು ಏಕೆ ವಾಪಸ್ ಮಾಡಿದರು? ಎಂದು ಕೃಷ್ಣ ಪ್ರಶ್ನಿಸಿದ್ದಾರೆ. ಜಾರಿ ನಿರ್ದೇಶನಾಲಯ (ED) ಇದುವರೆಗೆ ಸುಮಾರು 460 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದರ ಜೊತೆಗೆ ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್ ಕುಮಾರ್ ಸುಮಾರು 70 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವುದನ್ನೂ ತಮ್ಮ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಸೌಜನ್ಯ ಸಾವಿಗೆ ಯಾರು ಕಾರಣ ಎಂದು ಖಚಿತಪಡಿಸುತ್ತೇನೆ:ಸ್ನೇಹಮಯಿ ಕೃಷ್ಣ
ನಾನು ದೂರು ದಾಖಲಿಸಿದ ಕೇವಲ ಒಂದೂವರೆ ವರ್ಷದಲ್ಲಿ ಇಷ್ಟೆಲ್ಲಾ ಕ್ರಮಗಳು ನಡೆದಿವೆ. ಆದರೆ ಗಿರೀಶ್ ಮಟ್ಟಣ್ಣನವರ್ ರೀತಿಯಲ್ಲಿ 13 ವರ್ಷಗಳಿಂದ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಕೇವಲ ಹೇಳಿಕೆ ನೀಡುವುದರಲ್ಲಿ ನಾನು ನಿಲ್ಲುವುದಿಲ್ಲ. ಇದೇ ವೇಳೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸವಾಲು ಹಾಕಿರುವ ಅವರು, ಸರ್ಕಾರ ಸೌಜನ್ಯ ಪ್ರಕರಣದ ತನಿಖೆಗೆ ಅಧಿಕೃತ ಆದೇಶ ಹೊರಡಿಸಿದರೆ, ಆ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತಪಡಿಸುತ್ತೇನೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Share This Article