ಚಿಕ್ಕಮಗಳೂರು: ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಹಾಗೂ ಅತಿವೃಷ್ಠಿ ಇವೆಲ್ಲಾ ರಾಜ್ಯದ ದಾಖಲೆಯಾಗಿದ್ದು ಅದರ ಸಂಭ್ರಮಕ್ಕೆ ಔತಣಕೂಟ ಮಾಡುತ್ತಿದ್ದಾರೆ ಎಂದು ಸಿಎಂ ಡಿನ್ನರ್ ಮೀಟಿಂಗ್ಗೆ ಎಂಎಲ್ಸಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿಎಂ ಸಿದ್ದರಾಮಯ್ಯ ಔತಣಕೂಟ ಆಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ 80% ದಾಟಿದೆ ಅಂತ ಗುತ್ತಿಗೆದಾರರು ಪ್ರೇಮಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 10 ಜಿಲ್ಲೆಗಳು ಅತಿವೃಷ್ಠಿಯಿಂದ ಕಂಗೆಟ್ಟು ಹೋಗಿವೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಯಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ. ಇದನ್ನೆಲ್ಲಾ ಸಂಭ್ರಮಾಚರಣೆ ಮಾಡಬೇಕಲ್ವಾ ಅದಕ್ಕೆ ಔತಣಕೂಟ ಆಯೋಜಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಶಾಕ್ ವಿಚಾರವಾಗಿ, ರಾಜ್ಯದಲ್ಲಿ ಮಂತ್ರಿಯಾಗಲು ಬಿಹಾರ ಚುನಾವಣೆಗೆ 300 ಕೋಟಿ ರೂ. ದೇಣಿಗೆ ಆರೋಪವಿದೆ. ಕಾಂಗ್ರೆಸ್ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆಯಾಗಿದೆ. ಭ್ರಷ್ಟಾಚಾರರಿಗಳಿಗೆ, ಕಾಳಸಂತೆಕೋರರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ ಬಂದಿದೆ. 60ರ ದಶಕದಿಂದಲೂ ಕಾಂಗ್ರೆಸ್ ಕಾಳಸಂತೆಕೋರರಿಗೆ ಪ್ರೋತ್ಸಾಹ ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆಲ್ಲಾ ಕಾಳಸಂತೆಯ ಪ್ರಮಾಣ ಹೆಚ್ಚು ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವ ಮೂಲದಿಂದ ಬೇಕಾದರೂ ಹಣ ಮಾಡಲಿ, ಒಟ್ಟು ಹಣ ಮಾಡಿದ್ದರೆ ಕಾಂಗ್ರೆಸ್ ಅವರಿಗೆ ಮಣೆ ಹಾಕುತ್ತೆ. ಇದು ಕಾಂಗ್ರೆಸ್ನಲ್ಲಿರುವ ವ್ಯವಸ್ಥೆ. ಕಾಂಗ್ರೆಸ್ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆ. ಅನುಮಾನವಿದ್ದರೆ 40 ಜನರ ಟ್ರ್ಯಾಕ್ ರೆಕಾರ್ಡ್ ನೋಡಿ ನಿಮಗೆ ಅರ್ಥವಾಗುತ್ತೆ ಎಂದಿದ್ದಾರೆ.
