ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಇಂದು 39ನೇ ದಿನ. ಆರನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧದಿಂದ ಭಾರತಕ್ಕೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದೆ. ಇದಕ್ಕೆ ಭಾರತದ ವಿಮಾನಯಾನ ವಲಯವೂ ಹೊರತಾಗಿಲ್ಲ. ಕಚ್ಚಾತೈಲದ ಬೆಲೆ ಏರಿಕೆ, ಹಲವು ದೇಶಗಳ ವಾಯುಪ್ರದೇಶ ಮುಚ್ಚುವಿಕೆ ಸೇರಿದಂತೆ ಭಾರತದ ಏವಿಯೇಷನ್ ಉದ್ಯಮಕ್ಕೆ 2,500 ಕೋಟಿ ರೂ. ನಷ್ಟ ಉಂಟಾಗಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಪರಿಣಾಮ ಈಗ ಭಾರತೀಯ ವಿಮಾನಯಾನ ಸಂಸ್ಥೆಗಳ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಪಶ್ಚಿಮ ಏಷ್ಯಾವನ್ನು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆ ಎಂದು ಪರಿಗಣಿಸಲಾಗಿದೆ. ಅಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳು ವಿಮಾನಗಳ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಈ ಪರಿಸ್ಥಿತಿಯು ದೈನಂದಿನ ವಿಮಾನಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ. ವಿಮಾನಯಾನ ಸಂಸ್ಥೆಗಳು ತಮ್ಮ ದೈನಂದಿನ ಹಾರಾಟದ ಕಾರ್ಯಾಚರಣೆಯನ್ನು ಗಣನೀಯವಾಗಿ ಕಡಿಮೆ ಮಾಡುವಂತೆ ಮಾಡಿದೆ. ಈ ಕಡಿತವು ವಿಮಾನ ಸಾಮರ್ಥ್ಯದ ಬಳಕೆಯ ಕೊರತೆಗೆ ಕಾರಣವಾಗಿದೆ. ಅನೇಕ ವಿಮಾನಗಳು ನಿಷ್ಕಿçಯವಾಗಿದ್ದು ವಿಮಾನಯಾನ ಆದಾಯದ ಮೇಲೆ ನಿರಂತರ ಒತ್ತಡ ಉಂಟು ಮಾಡುತ್ತಿದೆ.
ಬೇಸಿಗೆ ವೇಳಾಪಟ್ಟಿಯಲ್ಲಿ ಇಂಡಿಗೋ ಪ್ರತಿದಿನ ಸುಮಾರು 310 ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸಲು ಅನುಮೋದನೆ ನೀಡಲಾಗಿದೆ. ಆದರೆ ಪ್ರಸ್ತುತ, ಅದು ತನ್ನ ಒಟ್ಟು ಸಾಮರ್ಥ್ಯದ ಸರಿಸುಮಾರು 60% ಮಾತ್ರ ಬಳಸುತ್ತಿದೆ. ವಿಮಾನಯಾನ ಸಂಸ್ಥೆಗಳು ಗಲ್ಫ್ ಸಹಕಾರ ಮಂಡಳಿ ದೇಶಗಳಿಗೆ ಸುಮಾರು 115 ವಿಮಾನಗಳನ್ನು ಮತ್ತು ಕಾಮನ್ವೆಲ್ತ್ ದೇಶಗಳಿಗೆ 10 ವಿಮಾನಗಳನ್ನು ರದ್ದುಗೊಳಿಸಿವೆ. ಈ ಮಾರ್ಗಗಳಲ್ಲಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಭಾರತ-ಜಿಸಿಸಿ ಮಾರ್ಗದಲ್ಲಿ 40% ಪಾಲನ್ನು ಹೊಂದಿರುವ ಇಂಡಿಗೋ, ಈ ಕಡಿತದಿಂದ ಗಮನಾರ್ಹವಾಗಿ ನಷ್ಟ ಅನುಭವಿಸುತ್ತಿದೆ. ಏರ್ ಇಂಡಿಯಾ ಗ್ರೂಪ್ ಸಹ ಇದಕ್ಕೆ ಹೊರತಾಗಿಲ್ಲ. ಅಂದಾಜಿನ ಪ್ರಕಾರ, ಇದು ಈ ಪ್ರದೇಶಕ್ಕೆ 100ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತಿದ್ದರೂ, ಪ್ರಸ್ತುತ ಇದು ಕೇವಲ 30-40 ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದೆ. ಇದು ಕಂಪನಿಗಳ ಕಾರ್ಯಾಚರಣೆ ಸಾಮರ್ಥ್ಯ ಮತ್ತು ಆದಾಯ ಎರಡರ ಮೇಲೂ ಒತ್ತಡವನ್ನು ಹೆಚ್ಚಿಸಿದೆ.
ನಿರಂತರವಾಗಿ ನಡೆಯುತ್ತಿರುವ ಈ ಯುದ್ಧದಿಂದ ಸದ್ಯ ಭಾರತದ ವಿಮಾನಯಾನ ಉದ್ಯಮಕ್ಕೆ 2,500 ಕೋಟಿ ನಷ್ಟವಾಗಿದೆ. ತಜ್ಞರ ಪ್ರಕಾರ ಪಾಕಿಸ್ತಾನ ವಾಯುಪ್ರದೇಶವು ಮುಚ್ಚಿಲ್ಲ. ಒಂದು ವೇಳೆ ಮುಚ್ಚಲ್ಪಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಇದು ಭಾರತದಿಂದ ಯುರೋಪಿಗೆ ಹೋಗುವ ಅತ್ಯಂತ ಲಾಭದಾಯಕ ಮಾರ್ಗಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಕಂಪನಿಗಳ ಆರ್ಥಿಕ ಪರಿಸ್ಥಿತಿ ಮೇಲೆ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾವಿಗೆ ಬಿದ್ದ ವೃದ್ಧ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಟ; ಪ್ರಾಣ ಉಳಿಸಿದ ಗ್ಯಾಸ್ ಸಿಲಿಂಡರ್ ಒಟಿಪಿ
ವಿಮಾನಯಾನ ಸಂಸ್ಥೆ ನಷ್ಟಕ್ಕೆ ಕಾರಣ ಏನು?
– ಗಲ್ಫ್ನ ಹಲವು ರಾಷ್ಟçಗಳಿಂದ ತಮ್ಮ ವಾಯುಪ್ರದೇಶ ಬಂದ್.
– ದುಬೈ, ಅಬುಧಾಬಿಯಲ್ಲಿ ಗಲ್ಫ್ ವಿಮಾನಯಾನ ಸಂಸ್ಥೆಗಳಿಗೆ ಆದ್ಯತೆ.
– ಕೆಲವು ಮಾರ್ಗಗಳಲ್ಲಿ ಏಕಮುಖ ಪ್ರಯಾಣಿಕರ ದಟ್ಟಣೆ.
– ಇದರಿಂದಾಗಿ ವಿಮಾನಗಳು ಖಾಲಿಯಾಗಿ ವಾಪಸ್ ಹಿನ್ನೆಲೆ ನಷ್ಟ.
– ಪಶ್ಚಿಮ ಏಷ್ಯಾದಲ್ಲಿ ಕೆಲವು ವಾಯುಪ್ರದೇಶ ಮುಚ್ಚಲಾಗುತ್ತಿದೆ.
– ಇದರಿಂದ ಶೇ.40-50 ವಿಮಾನ ವಿಳಂಬ ಹಿನ್ನೆಲೆ ಇಂಧನ ವೆಚ್ಚ.
– ಜೆಟ್ ಇಂಧನ ಬೆಲೆ ಹೆಚ್ಚಿಸಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ..
ಹೀಗೆ ಹಲವು ಕಾರಣಗಳಿಂದ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, ಯುದ್ಧ ಹೀಗೆ ಮುಂದುವರಿದರೆ ಭಾರತದ ಕಂಪನಿಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗುವ ಸಾಧ್ಯತೆಗಳಿದೆ.
