ಕೊಪ್ಪಳ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣ ಸದ್ದು ಮಾಡಿದ ಬಳಿಕ ಸದ್ಯ ಕೊಪ್ಪಳದಲ್ಲೂ ಅಂತಹದ್ದೆ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಬ್ಬ 16 ಕ್ಕೂ ಹೆಚ್ಚು ಹಿಂದೂ ಯುವತಿಯರ ಅಶ್ಲೀಲ ರೀತಿಯ ಫೋಟೋಗಳನ್ನ ಫೋನ್ನಲ್ಲಿ ಇಟ್ಟುಕೊಂಡು ಹಿಂದೂ ಸಂಘಟನೆಗಳ ಕೈಗೆ ತಗಲಾಕಿ ಕೊಂಡಿದ್ದಾನೆ. ಸದ್ಯ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಿಂದೂ ಸಂಘಟನೆಗಳಿಂದ ಪೊಲೀಸ್ ಠಾಣೆಗೆ ದೂರು
ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ಲಿಂ ಯುವಕ ಮುಸ್ತಫಾ ಎಂಬಾತನ ಬಳಿ, 16 ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆಗಿನ ಫೋಟೋ ಹಾಗೂ ಅಶ್ಲೀಲ ವಿಡಿಯೊಗಳು ಪತ್ತೆಯಾಗಿವೆ. ಈತ ಪ್ರೀತಿ ಹೆಸರಲ್ಲಿ ಹಿಂದೂ ಯುವತಿಯರನ್ನ ಟಾರ್ಗೆಟ್ ಮಾಡಿ, ಅವರಿಗೆ ಡ್ರಗ್ಸ್ ಗಾಂಜಾ ನೀಡಿ ಅಶ್ಲೀಲ ವಿಡಿಯೊಗಳನ್ನ ಮಾಡಿಕೊಂಡಿದ್ದಾನೆ. ಜೊತೆಗೆ ತಾನೂ ಗಾಂಜಾ ಸೇದುವ ವಿಡಿಯೊಗಳು ಆತನ ಮೊಬೈಲ್ನಲ್ಲಿ ಪತ್ತೆಯಾಗಿವೆ. ಈತ ಹಿಂದೂ ಯುವತಿಯರನ್ನೆ ಟಾರ್ಗೆಟ್ ಮಾಡಿ ಅವರಿಗೆ ಆಸೆ ಆಮಿಷಗಳನ್ನ ತೋರಿಸಿ, ಲವ್ ಜಿಹಾದ್ ಮಾಡ್ತಾಯಿದ್ದ ಎಂದು ಹಿಂದೂ ಸಂಘಟನೆಗಳು ಆರೋಪಿಸಿ, ಕೊಪ್ಪಳ ನಗರ ಠಾಣೆಯಲ್ಲಿ ಮುಸ್ತಫಾ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಹಿಂದೆ ಯರ್ಯಾರು ಇದ್ದಾರೆ ಎಲ್ಲರನ್ನೂ ಬಂಧಿಸಬೇಕು ಎಂದು ಹಿಂದೂ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ಈ ಕುರಿತು ದೂರು ನೀಡಿದ್ದು, ಮುಸ್ತಫಾ ಖಾದ್ರಿ ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿನಿಯೊಂದಿಗೆ ಸಂಶಯಾಸ್ಪದ ಹಾಗೂ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ ಎಂದು ದೂರು ಬಂದಿತ್ತು. ಆಗ ಯುವಕನ ಬಳಿಯಿದ್ದ ಮೊಬೈಲ್ ಕಸಿದುಕೊಂಡು ಪರಿಶೀಲಿಸಿ ದಾಗ ಒಂದು ಫೋನ್ನಲ್ಲಿ ಮೂರು ಸಾವಿರ ಫೋಟೊಗಳು, ಆರು ಸಾವಿರ ವಿಡಿಯೊಗಳು, ಮತ್ತೊಂದು ಫೋನ್ನಲ್ಲಿ ನಾಲ್ಕು ಸಾವಿರ ಯುವತಿಯರ ಫೋಟೊಗಳು ಹಾಗೂ 3,700 ವಿಡಿಯೊಗಳು ಇರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.ಸದ್ಯ ಈ ಮುಸ್ಲಿಂ ಯುವಕ ಮುಸ್ತಫಾ ಕೇವಲ ಲವ್ ಜಿಹಾದ್ ಅಷ್ಟೆ ಅಲ್ಲದೇ, ಮಾದಕ ವಸ್ತುಗಳ ಸೇವನೆ, ಮಾರಾಟ, ಮಟ್ಕಾ ಬುಕ್ಕಿಂಗ್ ಸೇರಿ ಹಲವು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ, ಈ ಭಾಗದಲ್ಲಿ ಹಲವು ಮಹಿಳೆಯರು ಕಾಣೆಯಾದ ಘಟನೆಗಳು ಕೂಡಾ ನಡೆದಿವೆ. ಇದರ ಹಿಂದೆ ಒಂದು ದೊಡ್ಡ ಜಾಲವೆ ಕೆಲಸ ಮಾಡ್ತಿದೆ. ಹೀಗಾಗಿ ಈ ಜಾಲವನ್ನ ಪತ್ತೆಮಾಡಬೇಕು, ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದು ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಯುವತಿಯಿಂದಲೂ ದೂರು
ಈ ನಡುವೆ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೂಡ ದೂರು ದಾಖಲಾಗಿದೆ. ಕೊಪ್ಪಳ ನಗರ ಠಾಣೆಗೆ ಅಗಮಿಸಿ ಮುಸ್ತಫಾನನ್ನ ಪ್ರೀತಿಸುತ್ತಿದ್ದ ಯುವತಿಯಿಂದ ಮೊಬೈಲ್ ಕಸಿದುಕೊಂಡ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮೆಡಿಕಲ್ ಕಾಲೇಜ್ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ 8-10 ಜನ ಅಪರಿಚಿತ ಹುಡುಗರು ಮುಸ್ತಫಾಗೆ ಜೀವ ಬೆದರಿಕೆ ಹಾಕಿ ಅತನ ಬಳಿ ಇದ್ದ ಎರಡು ಮೊಬೈಲ್ ನೋಡಿ ಕೊಡುತ್ತೇನೆಂದು ಪಡೆದುಕೊಂಡು ವಾಪಸ್ ಕೊಟ್ಟಿಲ್ಲಾ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಈ ಲವ್ ಜಿಹಾದ್ ಪ್ರಕರಣ ಎಲ್ಲ ಕಡೆ ಸದ್ದು ಮಾಡ್ತಿದೆ. ಸದ್ಯ ಕೊಪ್ಪಳದಲ್ಲಿ ಕೂಡಾ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ.
