ಮೈಸೂರು: ಮಹಿಳಾ ಮೀಸಲಾತಿಯು ಕರ್ನಾಟಕ, ಭಾರತ ಮಾತ್ರವಲ್ಲ ವಿಶ್ವದ ಎಲ್ಲ ಮಹಿಳೆಯರಿಗೂ ಸಂಭ್ರಮದ ಕ್ಷಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ತಿಳಿಸಿದ್ದಾರೆ. ಪ್ರಧಾನಿಯವರಿಂದ ಇದೊಂದು ಪ್ರಮುಖ ನಿರ್ಣಯ ಎಂದು ವಿಶ್ಲೇóಷಿಸಿದ್ದಾರೆ.
ಮೈಸೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಜೀ ಯವರ ಕನಸಿನ ಭಾರತ, 2047ರ ವಿಕಸಿತ ಭಾರತಕ್ಕೆ ಮಹಿಳಾ ನೇತೃತ್ವದ ಅಭಿವೃದ್ಧಿಯ ಚಿಂತನೆ ಇದರ ಹಿಂದಿದೆ ಎಂದು ವಿವರ ನೀಡಿದರು. ಇದು ಮಹಿಳಾ ನಾಯಕತ್ವದ ಪರಿಕಲ್ಪನೆ ಎಂದರು. ರಾಜಕೀಯ ಪಕ್ಷಗಳು ಇದರಲ್ಲಿ ರಾಜಕಾರಣ ಮಾಡುವುದಿಲ್ಲ ಎಂಬ ಅಪೇಕ್ಷೆ ಮತ್ತು ನಮ್ಮ ನಿರೀಕ್ಷೆ ಎಂದು ಹೇಳಿದರು.
ರಾಜಕೀಯವಾಗಿ ಮಹಿಳಾ ಸಬಲೀಕರಣ ಮಾಡುವ ಶೇ 33 ಮೀಸಲಾತಿಯನ್ನು ನೀಡಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ಇದೇ 16ರಿಂದ ಕರೆದಿದ್ದಾರೆ. ಸಂಸತ್ತಿನ ಅಧಿವೇಶನದಲ್ಲಿ 3 ದಿನಗಳ ಕಾಲ ನಾರಿಶಕ್ತಿ ವಂದನ್ ಕುರಿತು ಚರ್ಚೆ ನಡೆಯಲಿದೆ. ಇದು ಕಾನೂನಾಗಿ ಜಾರಿಗೊಳ್ಳಲಿದೆ. ಈಗಾಗಲೇ ಲೋಕಸಭೆಯಲ್ಲಿ 543 ಸೀಟುಗಳಿದ್ದು ಅದನ್ನು ಹೆಚ್ಚಿಸಿ 816 ಮಾಡಲಿದ್ದಾರೆ. ಇದರಿಂದ ಪುರುಷರ ಇರುಸುಮುರುಸನ್ನು ತಪ್ಪಿಸಲು ಸಾಧ್ಯವಿದೆ. ಜನಸಂಖ್ಯೆ ಹೆಚ್ಚಳದಿಂದ ಸೀಟುಗಳನ್ನು ಹೆಚ್ಚಿಸುವ ಅನಿವಾರ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಗೌರವಕ್ಕೆ ಸಂಬಂಧಿಸಿದ ಸ್ವಚ್ಛ ಭಾರತ್ ಮೂಲಕ ಶೌಚಾಲಯ ನಿರ್ಮಾಣ, ಶಿಕ್ಷಣಕ್ಕೆ ಸಂಬಂಧಿಸಿ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮವನ್ನು ಜಾರಿ ಮಾಡಿದ್ದಾರೆ. ಜನನದಲ್ಲೇ ಹೆಣ್ಮಗುವಿನ ಕೊಲ್ಲುವಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಂಡರು ಎಂದು ಮೆಚ್ಚುಗೆ ಸೂಚಿಸಿದರು. ಮಹಿಳೆಯರು ಮನೆ ಮಾತ್ರವಲ್ಲದೇ ಕೆಲಸ ಮಾಡುವ ಸ್ಥಳದಲ್ಲೂ ನಾಯಕತ್ವ ವಹಿಸಬಹುದು ಎಂಬ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳ ಹೆಚ್ಚಳಕ್ಕೆ ಮೋದಿಜೀ ಅವರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಭಾಗ್ಯಲಕ್ಷ್ಮಿ ಯೋಜನೆಯನ್ನು ಯಡಿಯೂರಪ್ಪ ಅವರ ಸರಕಾರ ಹೆಣ್ಣುಮಗುವಿನ ಭ್ರೂಣ ಹತ್ಯೆ ತಡೆಯುವ ದೃಷ್ಟಿಯಿಂದ ಆ ಕಾಲದಲ್ಲೇ ಜಾರಿಗೊಳಿಸಿತ್ತು. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಿದೆ ಎಂದು ವಿವರಿಸಿದರು. ಅದೆಲ್ಲದರ ಜೊತೆ ಸೈಕಲ್ ವಿತರಣೆ ಮಾಡಿದರು. ಇದು ಮಹಿಳಾ ಸಬಲೀಕರಣದ ದೃಢ ಹೆಜ್ಜೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರು ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ನೀಡಿದ್ದಾರೆ. ಜನಧನ್, ಮುದ್ರಾ ಯೋಜನೆ ಸೇರಿ ಹಲವು ಯೋಜನೆಗಳನ್ನು ಅವರು ಜಾರಿಗೊಳಿಸಿದ್ದಾರೆ ಎಂದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆಗಳನ್ನು ಕೊಡಲಾಗುತ್ತದೆ. ಮೋದಿಜೀ ಅವರ ದೂರದೃಷ್ಟಿಯ ಪರಿಣಾಮವಾಗಿ ಮಹಿಳೆಯರ ಹೆಸರಿನಲ್ಲೇ ಮನೆಗಳನ್ನು ಕೊಡಲಾಗುತ್ತಿದೆ ಎಂದು ಗಮನಕ್ಕೆ ತಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಳಾ ಸೋಮಶೇಖರ್, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ರೀನಾ ಪ್ರಕಾಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಣುಕಾ ರಾಜು ಮತ್ತು ಮೈಸೂರು ಗ್ರಾಮಾಂತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ನಳಿನಾ ಇದ್ದರು.
ಮಹಿಳಾ ಮೀಸಲಾತಿ ಸಂಭ್ರಮದ ಕ್ಷಣ: ಮಾಳವಿಕಾ ಅವಿನಾಶ್
