ಬೆಂಗಳೂರು: ಒಂದು ಕಡೆ ಸುಡುತ್ತಿರುವ ಬಿಸಿಲು ಹಾಗೂ ತಾಪಮಾನ ಏರಿಕೆ ಜನರನ್ನು ಹೈರಾಣಾಗಿಸುತ್ತಿದ್ದರೆ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ತರಕಾರಿ ದರಗಳು ಗಗನಕ್ಕೇರುತ್ತಿವೆ. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಪ್ರತಿ ಕೆಜಿ ತರಕಾರಿ ದರದಲ್ಲಿ 10 ರಿಂದ 40 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಗ್ರಾಹಕರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗಿರುವುದರಿಂದ ತರಕಾರಿ ಇಳುವರಿ ಕುಸಿದಿದೆ. ಮಾರುಕಟ್ಟೆಗೆ ಬರುತ್ತಿರುವ ತರಕಾರಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ ಹೋಟೆಲ್ ಮತ್ತು ಸಮಾರಂಭಗಳಿಗೆ ಬೇಡಿಕೆ ಹೆಚ್ಚಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಪಲಾವ್ ಮತ್ತು ಸಾಂಬಾರ್ಗೆ ಬಳಸುವ ಬೀನ್ಸ್ ದರ ಈಗ ಕೆಜಿಗೆ 100 ರೂಪಾಯಿ ತಲುಪಿದ್ದು, ಸಾಮಾನ್ಯರ ಕೈಗೆ ಎಟುಕದಂತಾಗಿದೆ.
ಮಾರುಕಟ್ಟೆ ದರ ಪಟ್ಟಿ (ಪ್ರತಿ ಕೆಜಿಗೆ ರೂ.ಗಳಲ್ಲಿ)
ಪ್ರಸ್ತುತ ಮಾರುಕಟ್ಟೆಯಲ್ಲಿನ ದರಗಳು ಮತ್ತು ಕಳೆದ ವಾರದ ದರಗಳ ವ್ಯತ್ಯಾಸ ಹೀಗಿದೆ:
ತರಕಾರಿಗಳು – ಪ್ರಸ್ತುತ ದರ – ಒಂದು ವಾರದ ಹಿಂದಿನ ದರ
ಟೊಮೆಟೊ – 35 – 20
ಕ್ಯಾರೆಟ್ – 80 – 40 ಹೂಕೋಸು 1ಕ್ಕೆ – 20 – 10
ಗೆಡ್ಡೆಕೋಸು – 60 – 30
ಮೂಲಂಗಿ – 60 – 40
ಬೀನ್ಸ್ – 100 – 50
ಬದನೆಕಾಯಿ – 50 – 40
ಆಲೂಗಡ್ಡೆ – 50 – 30
ಹಾಗಲಕಾಯಿ – 60 – 40
ಹೀರೆಕಾಯಿ – 50 – 30
ದಪ್ಪಮೆಣಸಿನಕಾಯಿ – 60 – 40
ಬೀಟ್ರೂಟ್ – 60 – 40
ವ್ಯಾಪಾರಿಗಳ ಕಳವಳ
ದರ ಏರಿಕೆಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕ್ಷೀಣಿಸುತ್ತಿದೆ. ಬೆಲೆ ಹೆಚ್ಚಾದಂತೆ ಜನರು ತರಕಾರಿ ಖರೀದಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ, ಇದರಿಂದ ನಮಗೆ ವ್ಯಾಪಾರ ಮಾಡುವುದೇ ಕಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಂಡಿದ್ದಾರೆ. ಉಷ್ಣ ಅಲೆ ಇನ್ನೂ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
