ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ತಪ್ಪು ಮಾಡಿದ್ದರೆ, ಪಕ್ಷವು ಖಂಡಿತವಾಗಿಯೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಯಾವುದೇ ನಿರ್ಧಾರವನ್ನು ಜಾತಿಯ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗಲಿದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಸ್ತುತ ಮುಸ್ಲಿಂ ನಾಯಕರ ವಿಚಾರದಲ್ಲಿ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಅವರು ಯಾವುದೇ ತಪ್ಪು ಮಾಡದಿದ್ದರೆ. ಅವರಿಗೆ ಸಿಗಬೇಕಾದ ಗೌರವ ಮತ್ತು ಸ್ಥಾನಮಾನಗಳು ಖಂಡಿತವಾಗಿಯೂ ಮರಳಿ ಸಿಗಲಿವೆ. ತಮ್ಮನ್ನು ತಾವು ಸಮರ್ಥಿಸಿಕೊಂಡರೆ ಮುಂದೆ ಅವರಿಗೆ ಉನ್ನತ ಹುದ್ದೆಗಳು ಸಿಗುವ ಅವಕಾಶವೂ ಇರುತ್ತದೆ ಎಂದರು.
ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಮತ್ತು ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಾವು ಬೆನ್ನೆಲುಬಾಗಿದ್ದೇವೆ ಎಂಬ ಕಾರಣಕ್ಕೆ ಪಕ್ಷದ ಚೌಕಟ್ಟು ಮೀರಿ ಏನು ಬೇಕಾದರೂ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಪಕ್ಷದ ಅಧ್ಯಕ್ಷರ ತೀರ್ಮಾನಗಳನ್ನು ಪ್ರಶ್ನಿಸುವ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಪಕ್ಷದ ಅಧ್ಯಕ್ಷರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು. ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಅಥವಾ ದೂರು ನೀಡಲು ಪತ್ರ ಬರೆಯುವುದು ಇಂದಿನ ವಿಷಯವಲ್ಲ. ಇದು ಇಂದಿರಾ ಗಾಂಧಿಯವರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ಕಾಲದಲ್ಲೂ ವಿವಿಧ ಸಮುದಾಯಗಳು ಇಂತಹ ಎಚ್ಚರಿಕೆಗಳನ್ನು ನೀಡುತ್ತಲೇ ಇವೆ ಎಂದರು.
ಇನ್ನು ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಬಂದರೆ, ಯಾರಾದರೂ ಹೊಸ ಪಕ್ಷ ಕಟ್ಟುತ್ತೇವೆ ಎನ್ನುವುದಾದರೆ ಅದು ಒಳ್ಳೆಯದೇ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರು ಪಕ್ಷ ಕಟ್ಟಿ ಅಧಿಕಾರಕ್ಕೆ ಬರಲಿ. ಹಿಂದೆ ರೈತ ಸಂಘದವರು ಕೂಡ ಸ್ವಂತ ಪಕ್ಷ ಕಟ್ಟಿರಲಿಲ್ಲವೇ? ಜನ ಬೆಂಬಲ ನೀಡಿದರೆ ಅವರು ಅಧಿಕಾರ ನಡೆಸಲಿ, ರಾಜ್ಯದ ಚುಕ್ಕಾಣಿ ಹಿಡಿಯಲಿ, ಅದರಲ್ಲಿ ತಪ್ಪೇನಿಲ್ಲ. ಪಾಪ, ಸಿ.ಎಂ. ಇಬ್ರಾಹಿಂ ಅವರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರೂ ಸೇರಿ ಈ ಹಿಂದೆಯೇ ಈ ನಿಟ್ಟಿನಲ್ಲಿ ಬಹಳ ಶ್ರಮಪಟ್ಟಿದ್ದಾರೆ. ರಾಜ್ಯದ ಜನರು ಒಂದು ವೇಳೆ ಅವರಿಗೆ ಮನ್ನಣೆ ನೀಡಿ, ಅಧಿಕಾರ ಕೊಡುತ್ತೇವೆ ಎಂದರೆ ಅದನ್ನು ಸ್ವಾಗತಿಸೋಣ ಎಂದು ತಿಳಿಸಿದರು.
